ಗೋಣಿಕೊಪ್ಪಲು: ಕೊಡಗಿನ ಬುಡಕಟ್ಟು ಜನಾಂಗವಾದ ಜೇನುಕುರುಬರ ಸಂಭ್ರಮದ ಕುಂಡೆ ಹಬ್ಬ ಮೇ 22 ಮತ್ತು 23ರಂದು ಗೋಣಿಕೊಪ್ಪಲು ಬಳಿಯ ದೇವರಪುರದ ಭದ್ರಕಾಳಿ ದೇವಸ್ಥಾನದಲ್ಲಿ ನಡೆಯಲಿದೆ. ವಿರಾಜಪೇಟೆ ತಾಲ್ಲೂಕಿನ ಸುತ್ತಮುತ್ತಲಿನ ಜನರೇ ಅಲ್ಲದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ, ಬೂದಿತಿಟ್ಟು, ಅಳ್ಳೂರು ಮೊದಲಾದ ಭಾಗಗಳ ಬುಡಕಟ್ಟು ಜನರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಬುಡಕಟ್ಟು ಜನಾಂಗದ ಯುವಕರು ಹಾಗೂ ಪುರುಷರು ಮಹಿಳೆಯರ ಒಳ ಉಡುಪುಗಳನ್ನು ಮೈಮೇಲೆ ಧರಿಸಿಕೊಂಡು, ಅಶ್ಲೀಲ ಬೈಗುಳಗಳನ್ನೇ ಹಾಡಾಗಿಸಿಕೊಂಡು ಎದುರಿಗೆ ಸಿಕ್ಕಿದವರ ಬಳಿ ‘ಏ ಕುಂಡೆ’ ಎಂದು ಬೈಯ್ಯುತ್ತಾ ಹಣ ಬೇಡುವ ಈ ಗಿರಿಜನರ ಈ ಹಬ್ಬ ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರದಲ್ಲಿ ಜರುಗುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.
ಎರಡು ದಿನಗಳ ಕಾಲ ನಡೆಯುವ ಈ ಹಬ್ಬಕ್ಕೆ ಮೇ 22 ರಂದು ಚಾಲನೆ ದೊರೆಯಲಿದೆ. ಪೊನ್ನಂಪೇಟೆ ತಾಲ್ಲೂಕಿನ ದೇವರಪುರದ ಭದ್ರಕಾಳಿ ದೇವಸ್ಥಾನ ಹಬ್ಬ ಆಚರಣೆಯ ಕೇಂದ್ರ ಬಿಂದು. ವರ್ಷಪೂರ್ತಿ ಕಾಡಿನೊಳಗಿನ ಹಾಡಿ ಮತ್ತು ಕಾಫಿ ತೋಟದಲ್ಲಿ ವಾಸಿಸುವ ಜೇನುಕುರುಬರು ವರ್ಷಕ್ಕೆ ಒಮ್ಮೆ 2 ದಿನಗಳ ಕಾಲ ತಮಗೆ ಇಷ್ಟವಾದ ವೇಷ ಧರಿಸಿಕೊಂಡು ಸಂಭ್ರಮಿಸುತ್ತಾರೆ.
ಕಾಡಿನಿಂದ ನಾಡಿಗೆ ಬಂದು ಪಟ್ಟಣದ ಅಂಗಡಿ ಮುಂಗಟ್ಟುಗಳ ಮುಂದೆ ಕೈಗೆ ಸಿಕ್ಕಿದ ವಸ್ತುಗಳನ್ನು ತಾಳಮೇಳ ಮಾಡಿಕೊಂಡು ಕುಣಿದು ಕುಪ್ಪಳಿಸುತ್ತಾ ಹಣ ಬೇಡುತ್ತಾರೆ. ಎದುರಿಗೆ ಸಿಕ್ಕಿದವರನ್ನು ಅಶ್ಲೀಲವಾಗಿ ಬೈಯುತ್ತಾ ಹೋಗುತ್ತಾರೆ. ಇವರು ತೊಡುವ ವೇಷಗಳು ಇಂತಹದ್ದೇ ಅಂತ ಇರುವುದಿಲ್ಲ. ಕಸದ ಗುಂಡಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಆದರೂ ಸರಿ. ಅದನ್ನು ಮೈ ಅಥವಾ ತಲೆಗೆ ಸುತ್ತಿಕೊಳ್ಳುತ್ತಾರೆ. ಒಡೆದ ಪ್ಲಾಸ್ಟಿಕ್ ಬಿಂದಿಗೆ, ಡ್ರಂ, ಹಲಸಿನ ಕಾಯಿ ಸಿಪ್ಪೆ, ಮಹಿಳೆಯರ ಉಡುಪುಗಳು ಇವೆಲ್ಲವೂ ಬುಡಕಟ್ಟು ಯುವಕರ ಮೈಮೇಲಿರುತ್ತವೆ. ಸದಾ ಕಾಡಿನಲ್ಲಿ ಮತ್ತು ಕಾಫಿ ತೋಟದಲ್ಲಿಯೇ ಕಾಲ ಕಳೆಯುವ ಬುಡಕಟ್ಟು ಜನರ ಸಂಭ್ರಮವನ್ನು ಈ ಹಬ್ಬದಲ್ಲಿ ನೋಡಿಯೇ ಅನುಭವಿಸಬೇಕು.
ನಾಟಿ ಕೋಳಿ ಹಿಡಿಯುವ ಸಂಭ್ರಮ: ಹಬ್ಬದ 2ನೇ ದಿನ ಭದ್ರಕಾಳಿ ದೇವಸ್ಥಾನದ ಬಳಿ ಮಧ್ಯಾಹ್ನ 2 ಗಂಟೆ ವೇಳೆಗೆ ಎಲ್ಲರೂ ಸೇರುತ್ತಾರೆ. ಕೆಲವರು ದೇವರಿಗೆ ಹರಕೆ ತೀರಿಸಲು ಕೋಳಿ ತಂದಿರುತ್ತಾರೆ. ಅದನ್ನು ಮೇಲಕ್ಕೆ ಎಸೆದಾಗ ಗುಂಪಿನಲ್ಲಿ ಕುಣಿಯುವ ಸಾವಿರಾರು ಜನರು ಹಿಡಿಯಲು ತಾಮುಂದು ನಾಮುಂದು ಎಂದು ಮುಗಿಬೀಳುತ್ತಾರೆ. ಈ ಸಂದರ್ಭದಲ್ಲಿ ಕೋಳಿಯ ಒಂದೊಂದು ಅಂಗಾಂಗ ಒಬ್ಬೊಬ್ಬರ ಕೈಗೆ ಸಿಕ್ಕಿ ಚೂರು ಚೂರಾಗುತ್ತದೆ. ಜೀವಂತ ಕೋಳಿ ಸಿಕ್ಕಿದರೆ ಅದನ್ನು ಎಚ್ಚರಿಕೆಯಿಂದ ಸಾಕಿ ಮತ್ತೆ ಮುಂದಿನ ವರ್ಷ ತಂದು ಬಲಿಕೊಡುವ ಪದ್ಧತಿ ಇದೆ.
ಹೀಗೆ ಸಂಜೆವರೆಗೆ ಕಣಿದು ಕುಪ್ಪಳಿಸಿದ ಜನರು ಬಳಿಕ ಬೈದದ್ದು ತಪ್ಪಾಯಿತು ಎಂದು ಭದ್ರಕಾಳಿ ಮತ್ತು ಅಯ್ಯಪ್ಪನಲ್ಲಿ ಕ್ಷೆಮೆ ಕೇಳುತ್ತಾರೆ. ಆನಂತರ ತಾವು ಬೇಡಿದ್ದ ಹಣದಲ್ಲಿ ಕುಡಿದು ಉಳಿದದ್ದನ್ನು ದೇವಸ್ಥಾನದ ಹುಂಡಿಗೆ ಅರ್ಪಿಸಿ ಮನೆ ಕಡೆಗೆ ತೆರಳುತ್ತಾರೆ. ಹಬ್ಬ ನಡೆಯುವ ಸ್ಥಳದಲ್ಲಿ ದೊಡ್ಡ ಜಾತ್ರೆಯೇ ನೆರವೇರುತ್ತದೆ.
ಇಲ್ಲಿನ ಮನೆಯಪಂಡ ಮತ್ತು ಸಣ್ಣುವಂಡ ಕುಟುಂಬಸ್ಥರು ಭದ್ರಕಾಳಿ ದೇವಸ್ಥಾನದ ಭಂಡಾರದ ಪೆಟ್ಟಿಗೆಯನ್ನು ಕೃತಕ ಕುದುರೆ ಮತ್ತು ಕೊಡವ ವಾಲಗದೊಂದಿಗೆ ಅಂದು ದೇವಸ್ಥಾನಕ್ಕೆ ಕೊಂಡೊಯ್ಯುತ್ತಾರೆ. ಹಬ್ಬ ಮುಗಿದ ಬಳಿಕ ಮತ್ತೆ ಭಂಡಾರ ಪೆಟ್ಟಿಗೆಯನ್ನು ಮನೆಗೆ ತಂದು ಇಡುತ್ತಾರೆ.
ಹಬ್ಬದ ಹಿನ್ನೆಲೆ
ಅಯ್ಯಪ್ಪ ಎಂಬ ವ್ಯಕ್ತಿ ಜೇನುಕುರುಬರನ್ನು ಕರೆದುಕೊಂಡು ದಟ್ಟ ಅರಣ್ಯಕ್ಕೆ ಭೇಟೆಗೆ ಹೋದನಂತೆ. ಅಲ್ಲಿ ಭದ್ರಕಾಳಿ ಎಂಬ ಮಹಿಳೆ ಕಾಣಿಸಿಕೊಂಡಾಗ ಅಯ್ಯಪ್ಪ ಆಕೆಯ ವ್ಯಾಮೋಹಕ್ಕೆ ಒಳಗಾಗಿ ತನ್ನ ಜತೆಯಲ್ಲಿದ್ದ ಜೇನುಕರುಬರನ್ನು ಕಾಡಿನಲ್ಲೇ ಬಿಟ್ಟು ಆಕೆಯೊಂದಿಗೆ ಓಡಿ ಹೋದನಂತೆ. ದಿಕ್ಕುಗೆಟ್ಟಿದಂತಾದ ಜೇನುಕುರುಬರು ಮತ್ತೆ ಹಿಂದಿರುಗಲು ಅಸಹಾಯಕರಾಗಿ ದಾರಿ ಹುಡುಕಾಡುವಾಗ ಅವರಿಬ್ಬರು ಏಕಾಂತದಲ್ಲಿ ಮುಳುಗಿರುವುದು ಕಂಡು ಬಂದಿತಂತೆ. ತಮ್ಮನ್ನು ಮಧ್ಯ ಕಾಡಿನಲ್ಲಿ ಕೈಬಿಡಲು ಕಾರಣಳಾದ ಭದ್ರಕಾಳಿಯ ಮೇಲೆ ಕೋಪಗೊಂಡ ಜೇನುಕುರುಬರು ಆಕೆಯನ್ನು ‘ಏ ಕುಂಡೆ’ ಎಂದು ಮನಸಾರೆ ಶಪಿಸಿದರಂತೆ. ಹೀಗಾಗಿ ಭದ್ರಕಾಳಿಯನ್ನು ಮನಸೋ ಇಚ್ಚೆ ಅಶ್ಲೀಲವಾಗಿ ಬೈಯ್ಯುವ ಹಬ್ಬವೇ ‘ಕುಂಡೆಹಬ್ಬ’ ಎನ್ನುತ್ತಾರೆ ಹಿರಿಯರು.
ಮದ್ಯ ಮಾರಾಟ ನಿಷೇಧ
ಕುಂಡೆ ಹಬ್ಬದಲ್ಲಿ ಮೈಸೂರು ಮತ್ತು ಕೊಡಗಿನಿಂದ ಸುಮಾರು 7ರಿಂದ 8 ಸಾವಿರ ಮಂದಿ ಸೇರುವ ಸಂಭವವಿದೆ. ಈ ವೇಳೆ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಕೆಲವರು ತೊಂದರೆ ಕೊಡುವ ಸಾಧ್ಯತೆಯೂ ಇದೆ. ಹಾಗಾಗಿ ಮೇ 22ರ ಬೆಳಿಗ್ಗೆ 6 ಗಂಟೆಯಿಂದ 23ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ಗೋಣಿಕೊಪ್ಪಲಿನ ಸುತ್ತಮುತ್ತಲ 15 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.