ಕೋಲಾರ: ‘ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲಿನ ಗುಣಮಟ್ಟ ಕಾಪಾಡಿದಾಗ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ಸಮೂಹ ಹಾಲು ಕರೆಯುವ ಯಂತ್ರಗಳಿಗೆ ಚಾಲನೆ ನೀಡಿ ಮಾತನಾಡಿ, ‘ಮಹಿಳೆಯರು ಹೈನುಗಾರಿಕೆ ಜತೆಗೆ ಆದಾಯೋತ್ಪನ್ನ ಚಟುವಟಿಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.
‘ಸಹಕಾರಿ ಸಂಘಗಳ ಹುಟ್ಟು ಮತ್ತು ಬೆಳವಣಿಗೆ ಕಾರಣಕರ್ತರಾದ ವರ್ಗಿಸ್ ಕುರಿಯನ್, ಕರ್ನಾಟಕದ ಕ್ಷೀರ ಬ್ರಹ್ಮ ಎಂ.ವಿ.ಕೃಷ್ಣಪ್ಪ ಮತ್ತು ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರನ್ನು ರೈತರು ಸ್ಮರಿಸಬೇಕು. ಹೈನುಗಾರಿಕೆಯು ಜಿಲ್ಲೆಯ ರೈತರಿಗೆ ವರದಾನವಾಗಿದೆ’ ಎಂದು ತಿಳಿಸಿದರು.
‘ಕೋಚಿಮುಲ್ನಿಂದ ಗ್ರಾಮದ ಸಂಘಕ್ಕೆ ಸಮೂಹ ಹಾಲು ಕರೆಯುವ ಯಂತ್ರಗಳ ಖರೀದಿಗಾಗಿ ₹ 3.50 ಲಕ್ಷ ಹಣಕಾಸು ನೆರವು ನೀಡಲಾಗಿದೆ. ಜಿಲ್ಲೆಯ ರೈತರ ಜೀವನಾಡಿಯಾಗಿರುವ ಹೈನೋದ್ಯಮದ ಅಭಿವೃದ್ಧಿಗೆ ಸಹಕಾರ ಸಂಘಗಳು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಕೋಚಿಮುಲ್ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಮಾರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ವಿ.ಜಯರಾಮರೆಡ್ಡಿ, ವಿಸ್ತರಣಾಧಿಕಾರಿಗಳಾದ ಎಚ್.ಎಸ್.ನಾಗೇಂದ್ರ, ವಿ.ರಾಜಬಾಬು, ಎಸ್ಎಫ್ಸಿಎಸ್ ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.