ಕೆಜಿಎಫ್: ಆಂಡರಸನ್ಪೇಟೆ ವಿಭಾಗದ ಹದಿನಾಲ್ಕು ಗ್ರಾಮಗಳಲ್ಲಿ ವಿದ್ಯುತ್ ಅಸಮಪರ್ಕ ಸರಬರಾಜನ್ನು ಕೂಡಲೇ ಸರಿಪಡಿಸದೆ ಇದ್ದಲ್ಲಿ ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಗಳಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಕುರಿತಂತೆ ಗುರುವಾರ ಗ್ರಾಮಸ್ಥರು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮತದಾನದ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ.
ಆಂಡರಸನ್ಪೇಟೆಯ ಪಂಪ್ಸೆಟ್ಗೆ ಕಡಿಮೆ ವೋಲ್ಟೇಜ್ ನೀಡುತ್ತಿದ್ದು, ಕೊಳವೆಬಾವಿಯ ಮೋಟಾರ್ಗಳು ಕೆಲಸ ಮಾಡುತ್ತಿಲ್ಲ. ನೀರಿನ ಕೊರತೆಯಿಂದ ರೈತರ ಬೆಳೆಗಳು ಒಣಗುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳು ಕೈಗೆ ಸಿಗುತ್ತಿಲ್ಲ. ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ. ವಿದ್ಯುತ್ ಅನಿಯಮಿತ ಪೂರೈಕೆಯಿಂದಾಗಿ ರಾತ್ರಿ ಹೊತ್ತಿನಲ್ಲಿ ತೋಟಕ್ಕೆ ಹೋಗುವ ರೈತರಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ರಾತ್ರಿ ಹೊತ್ತು ಜಮೀನಿನಲ್ಲಿ ಕಾವಲು ಕಾಯಲು ಇಲ್ಲವೇ ಮಲಗಲು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ದೂರಿದರು.
ಅಧಿಕ ವೋಲ್ಟೇಜ್ ನೀಡಿ, ಕೊಳವೆಬಾವಿ ಮೋಟಾರ್ ಕೆಲಸ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೇಮಲತಾ ಮನವಿ ಸ್ವೀಕರಿಸಿದರು.
ಶ್ರೀನಿವಾಸ್, ರಾಜ್ಕುಮಾರ್, ಪಿ.ಜಿ.ಮಹೇಂದ್ರ, ವೆಂಕಟೇಶಪ್ಪ, ಮುನಿಸ್ವಾಮಿ, ಪವನ್, ಶಿವು ಇದ್ದರು.