ಕೋಲಾರ: ಒಂದೆಡೆ ತೀವ್ರ ಬರ, ಇನ್ನೊಂದೆಡೆ ಲೋಡ್ ಶೆಡ್ಡಿಂಗ್, ಬೆಳೆ ನಷ್ಟದಿಂದ ಹೈರಾಣಾಗಿರುವ ರೈತರು, ಹದಗೆಟ್ಟಿರುವ ರಸ್ತೆಗಳು. ಜೊತೆಗೆ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿರುವುದು ಸೇರಿದಂತೆ ಜಿಲ್ಲೆಯಲ್ಲಿ ಕಾಡುತ್ತಿರುವ ಹತ್ತಾರು ಸಮಸ್ಯೆಗಳು!
ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ರಚನೆಯಾಗಿ 34 ಸಚಿವರು ಇದ್ದರೂ ಕೋಲಾರ ಜಿಲ್ಲೆ ಕಂಡಿರುವುದು ಬೆರಳೆಣಿಕೆ ಸಚಿವರಿಗಷ್ಟೇ.
ಬೆಂಗಳೂರಿನ ವಿಧಾನಸೌಧದಿಂದ ಕೇವಲ 70 ಕಿ.ಮೀ ದೂರವಿರುವ ಕೋಲಾರ ಜಿಲ್ಲಾ ಕೇಂದ್ರಕ್ಕೆ ಬಂದು ಸಮಸ್ಯೆ ಆಲಿಸುವುದು, ಸಭೆ ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುವುದೇ ಹಲವು ಸಚಿವರಿಗೆ ಕಷ್ಟವಾಗಿದೆ ಎಂಬುದು ಜಿಲ್ಲೆಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಐದು ತಿಂಗಳ ಅವಧಿಯಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸೇರಿದಂತೆ ಆರು ಸಚಿವರು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇನ್ನುಳಿದವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹೋಗಿದ್ದಾರೆ.
ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಗುರುತಿಸಿದ್ದ ಜಾಗವನ್ನು ಕೇಂದ್ರ ಅರಣ್ಯ ಇಲಾಖೆ ತಿರಸ್ಕರಿಸಿದೆ. ಹತ್ತು ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಲೋಡ್ ಶೆಡ್ಡಿಂಗ್ನಿಂದ ರೈತರು, ವಿದ್ಯಾರ್ಥಿಗಳು, ಸಾಮಾನ್ಯರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಬರದಿಂದಾಗಿ ರೈತರು, ಹೈನುಗಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಯಾದ ಟೊಮೆಟೊಗೆ ವೈರಸ್ ಏಕೆ ಬಂತು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇನ್ನು ಕೋಲಾರ ನಗರ ಕಸದ ತೊಟ್ಟಿಯಾಗಿದೆ. ಹಲವೆಡೆ ಶಾಲಾ ಕಾಲೇಜುಗಳಲ್ಲಿ ಸಮಸ್ಯೆ ತುಂಬಿ ತುಳುಕುತ್ತಿದೆ. ಮೂಲಸೌಲಭ್ಯಗಳೂ ಇಲ್ಲ.
ಕೋಲಾರದಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿ ಸಂಬಂಧ ಹಲವಾರು ಯೋಜನೆ ರೂಪಿಸಿದ್ದರು. ಜೊತೆಗೆ ಪ್ರಚಾರ ಸಭೆಗಳಲ್ಲಿ ಕೋಲಾರ ಹಾಗೂ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿಗಳ ಪಟ್ಟಿಯನ್ನೇ ನೀಡಿದ್ದರು. ಆದರೆ, ಅವರೇ ಮುಖ್ಯಮಂತ್ರಿ ಆದ ಮೇಲೆ ಜಿಲ್ಲೆಗೆ ಕಾಲಿಟ್ಟಲ್ಲ. ನ.11ರಂದು ಯರಗೋಳ್ ಜಲಾಶಯ ಉದ್ಘಾಟನೆಗೆ ಬರುವುದಾಗಿ ಜಿಲ್ಲೆಯ ಶಾಸಕರಿಗೆ ಭರವಸೆ ಕೊಟ್ಟಿದ್ದಾರೆ. ಅಲ್ಲಿಗೆ ಆರು ತಿಂಗಳಾಗುತ್ತದೆ. ಕಳೆದ ಬಜೆಟ್ನಲ್ಲೂ ಕೋಲಾರಕ್ಕೆ ಉತ್ತಮ ಯೋಜನೆ ಲಭಿಸಿರಲಿಲ್ಲ.
ಇನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಡಿಸಿಎಫ್ ವಿ.ಏಡುಕೊಂಡಲು ಸೇರಿ ಪ್ರಮುಖ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುತ್ತಿರುವುದು ಕಡಿಮೆ. ಅಕ್ರಂ ಪಾಷ ನಿತ್ಯ ಒಂದಲ್ಲ ಒಂದು ಇಲಾಖೆಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದಾರೆ.
ಒಮ್ಮೆಯೂ ಭೇಟಿ ನೀಡದ ಮುಖ್ಯಮಂತ್ರಿ ಬರ, ಬೆಳೆ ನಷ್ಟ, ಲೋಡ್ ಶೆಡ್ಡಿಂಗ್ ಸೇರಿ ಜಿಲ್ಲೆಯಲ್ಲಿ ಹತ್ತಾರು ಸಮಸ್ಯೆ ಹದಗೆಟ್ಟಿರುವ ರಸ್ತೆಗಳು–ಕೇಳುವವರೇ ಇಲ್ಲ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.