ಕೋಲಾರ: ಕೋವಿಡ್ ಆತಂಕದ ನಡುವೆ ಜಿಲ್ಲೆಯಲ್ಲಿ ಸೋಮವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಸೂತ್ರವಾಗಿ ನಡೆಯಿತು.
ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾಕಷ್ಟು ಸಿದ್ಧತೆಯೊಂದಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, 70 ವಿದ್ಯಾರ್ಥಿಗಳು ಗೈರಾದರು. 117 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ 20,472 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಈ ಪೈಕಿ 20,402 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
ಬೆಳಿಗ್ಗೆ 10.-30ಕ್ಕೆ ಪರೀಕ್ಷೆ ನಿಗದಿಯಾಗಿತ್ತು. ಅಂತರ ಕಾಯ್ದುಕೊಳ್ಳಲು ಮತ್ತು ಗುಂಪುಗೂಡುವಿಕೆ ತಡೆಯಲು ಬೆಳಿಗ್ಗೆ 9.30ರಿಂದಲೇ ವಿದ್ಯಾರ್ಥಿಗಳಿಗೆ ಕೇಂದ್ರದೊಳಗೆ ಹೋಗಲು ಅವಕಾಶ ಕಲ್ಪಿಸಲಾಯಿತು. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸ್ವಯಂ ಸೇವಕರು ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸ್ ಹಾಕಿ ಮಾಸ್ಕ್ ವಿತರಿಸಿದರು.
ಪರೀಕ್ಷಾ ಕೊಠಡಿ ಸಂಖ್ಯೆ ಬಗ್ಗೆ ಧ್ವನಿವರ್ಧಕಗಳ ಮೂಲಕ ಮಾರ್ಗದರ್ಶನ ನೀಡಲಾಯಿತು. ಪ್ರತಿ ಕೇಂದ್ರದ ಮುಂದೆ ವಿದ್ಯಾರ್ಥಿಗಳಿಗೆ ಅಂತರ ಕಾಯ್ದುಕೊಳ್ಳಲು ಅವಕಾಶವಾಗುವಂತೆ ಬಾಕ್ಸ್ ರಚಿಸಲಾಗಿತ್ತು. ಕೇಂದ್ರದ ಮುಂಭಾಗದಲ್ಲಿ ಪೆಂಡಾಲ್ ಹಾಕಿ ಮಕ್ಕಳಿಗೆ ಸ್ವಾಗತ ಕೋರಿ ಕೋವಿಡ್–19 ಮಾರ್ಗಸೂಚಿ ಅನುಸರಿಸುವಂತೆ ಜಾಗೃತಿ ಮೂಡಿಸಲಾಯಿತು.
ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಸಿಬ್ಬಂದಿ ಕೈಗಳಿಗೆ ಗ್ಲೌಸ್ ಧರಿಸಿಯೇ ಪರೀಕ್ಷಾ ಕಾರ್ಯ ನಿರ್ವಹಿಸಿದರು. ಪರೀಕ್ಷೆ ಮುಗಿಸಿ ಹೋಗುವಾಗಲೂ ಮಕ್ಕಳು ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ವಹಿಸಲಾಯಿತು.
ತಾಲ್ಲೂಕುವಾರು ವಿವರ: ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯ ಒಳಗೊಂಡಂತೆ ಒಟ್ಟಾರೆ 120 ಅಂಕಗಳಿಗೆ ಪರೀಕ್ಷೆ ನಡೆಯಿತು. ಅನಾರೋಗ್ಯದ ಕಾರಣ 3 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಯಿತು.
ಬಂಗಾರಪೇಟೆ ತಾಲ್ಲೂಕಿನಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 3,251 ವಿದ್ಯಾರ್ಥಿಗಳ ಪೈಕಿ 8 ಮಂದಿ ಗೈರಾದರು. ಉಳಿದ 3,243 ಮಂದಿ ಪರೀಕ್ಷೆ ಬರೆದರು. ಕೆಜಿಎಫ್ ತಾಲ್ಲೂಕಿನಲ್ಲಿ 2,517 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಅಂತಿಮವಾಗಿ 2,513 ಮಂದಿ ಪರೀಕ್ಷೆ ಬರೆದರು. 4 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು.
ಕೋಲಾರ ತಾಲ್ಲೂಕಿನಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 5,801 ವಿದ್ಯಾರ್ಥಿಗಳ ಪೈಕಿ 5,776 ಮಂದಿ ಪರೀಕ್ಷೆ ಬಂದರು. ಉಳಿದ ಹಾಜರಾಗಿ 25 ಮಂದಿ ಗೈರಾದರು. ಮಾಲೂರು ತಾಲ್ಲೂಕಿನಲ್ಲಿ 2,960 ವಿದ್ಯಾರ್ಥಿಗಳ ಪೈಕಿ 2,945 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದರು ಮತ್ತು 15 ಮಂದಿ ಗೈರಾಗಿದರು.
ಮುಳಬಾಗಿಲು ತಾಲ್ಲೂಕಿನಲ್ಲಿ 3,165 ಮಂದಿ ನೋಂದಾಯಿಸಿದ್ದು, 3,153 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು ಮತ್ತು 12 ಮಂದಿ ಗೈರಾದರು. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಸರು ನೋಂದಾಯಿಸಿದ್ದ 2,778 ವಿದ್ಯಾರ್ಥಿಗಳ ಪೈಕಿ 2,772 ಮಂದಿ ಪರೀಕ್ಷೆಗೆ ಬಂದರು ಮತ್ತು 6 ಮಂದಿ ಗೈರಾದರು.
ಎಸ್ಪಿ ಪರಿಶೀಲನೆ: ಪರೀಕ್ಷಾ ಕೇಂದ್ರಗಳ ಸುತ್ತ ಪರೀಕ್ಷಾ ದಿನದಂದು 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೇ, ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ಬಾಬು ಜಿಲ್ಲಾ ಕೇಂದ್ರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಪ್ರಥಮ ಭಾಷೆ,ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆ ಒಟ್ಟು 120 ಅಂಕಗಳಿಗೆ ಜುಲೈ 22ರಂದು ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.