ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಸಾಕಾಣಿಕೆ– ಹೈನುಗಾರಿಕೆ ಸಾಲಕ್ಕೆ ಸಬ್ಸಿಡಿ

ನಬಾರ್ಡ್‌ನಿಂದ ₹ 4.29 ಕೋಟಿ ಬಿಡುಗಡೆ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ
Last Updated 3 ಜೂನ್ 2020, 14:19 IST
ಅಕ್ಷರ ಗಾತ್ರ

ಕೋಲಾರ: ‘ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆಗೆ 2019ರ ನವೆಂಬರ್‌ ನಂತರ ಸಾಲ ಪಡೆದ ರೈತರಿಗೆ ನಬಾರ್ಡ್‌ನಿಂದ ₹ 4.29 ಕೋಟಿ ಸಬ್ಸಿಡಿ ಹಣ ಬಿಡುಗಡೆಯಾಗಿದ್ದು, ಈ ಯೋಜನೆಯನ್ನು ಕುರಿ, ಹಂದಿ, ರೇಷ್ಮೆ ಹುಳು ಸಾಕಾಣಿಕೆಗೂ ವಿಸ್ತರಿಸಲು ಮನವಿ ಮಾಡಲಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಇಲ್ಲಿ ಬುಧವಾರ ಸುಗಟೂರು ಎಸ್‍ಎಫ್‌ಸಿಎಸ್‌ ವ್ಯಾಪ್ತಿಯ ರೈತರಿಗೆ ಬೆಳೆ ಸಾಲ ವಿತರಿಸಿ ಮಾತನಾಡಿ, ‘ಬ್ಯಾಂಕ್‌ನಿಂದ 2019ರ ನವೆಂಬರ್‌ ನಂತರ ಕೋಳಿ ಸಾಕಾಣಿಕೆಗೆ, ಹೈನುಗಾರಿಕೆಗೆ ಸಾಲ ಪಡೆದ ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ 33 ಹಾಗೂ ಇತರೆ ವರ್ಗದ ರೈತರಿಗೆ ಶೇ 25 ಸಬ್ಸಿಡಿ ಬಿಡುಗಡೆಯಾಗಿದೆ’ ಎಂದು ವಿವರಿಸಿದರು.

‘₹ 40 ಲಕ್ಷ ಸಾಲ ಪಡೆದ ರೈತರಿಗೆ ₹ 10 ಲಕ್ಷ ಸಬ್ಸಿಡಿ ಸಿಗಲಿದೆ. ಹೀಗಾಗಿ ರೈತರು ಸಾಲದ ಸಂಕಷ್ಟದಿಂದ ಪಾರಾಗಲು ನೆರವಾಗಲಿದೆ. ರೈತರು ಸಾಲದ ಕಂತನ್ನು ಪ್ರತಿ 3 ತಿಂಗಳಿಗೆ ತಪ್ಪದೇ ಪಾವತಿಸಬೇಕು. ಇಲ್ಲದಿದ್ದರೆ ಸಬ್ಸಿಡಿ ಹಣ ವಾಪಸ್‌ ಹೋಗುತ್ತದೆ’ ಎಂದರು.

‘ನಬಾರ್ಡ್ ನೀಡುವ ಈ ಸಹಾಯಧನದ ಹಣವು ರೈತರ ಸಬ್ಸಿಡಿ ಮೀಸಲು ನಿಧಿ (ರಿಜರ್ವ್ ಫಂಡ್‌) ಖಾತೆಯಲ್ಲಿರುತ್ತದೆ. ಕಡೆಯಲ್ಲಿ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳುವುದರಿಂದ ರೈತರು ತಮ್ಮ ಸಾಲದಲ್ಲಿ ಶೇ 25ರಷ್ಟನ್ನು ಮರು ಪಾವತಿ ಮಾಡುವಂತಿಲ್ಲ’ ಎಂದು ಮಾಹಿತಿ ನೀಡಿದರು.

‘ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಗೆ ನಬಾರ್ಡ್ ಈ ಹಣಕಾಸು ವರ್ಷದಲ್ಲಿ ಯೋಜನೆ ಜಾರಿ ಮಾಡಿದ ನಂತರವಷ್ಟೇ ರೈತರಿಗೆ ಮಧ್ಯಮಾವಧಿ ಸಾಲ ಕೊಡುತ್ತೇವೆ. ಯೋಜನೆ ಜಾರಿಗೂ ಮುನ್ನ ಯಾವ ರೈತರಿಗೂ ಸಾಲ ಸೌಲಭ್ಯ ಸಿಗುವುದಿಲ್ಲ. ಏಕೆಂದರೆ ಶೇ 25ರ ಸಬ್ಸಿಡಿ ಹಣದಿಂದ ರೈತರು ವಂಚಿತರಾಗುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ಮಾದರಿ ಸೊಸೈಟಿ: ‘ತಾಲ್ಲೂಕಿನ ಸುಗಟೂರು ಎಸ್‍ಎಫ್‌ಸಿಎಸ್‌ ಲಾಕ್‌ಡೌನ್‌ ಸಂಕಷ್ಟದ ಪರಿಸ್ಥಿತಿಯಲ್ಲೂ ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಅವಿಭಜಿತ ಕೋಲಾರ ಜಿಲ್ಲೆಗೆ ಮಾದರಿಯಾಗಿದೆ, ಸೊಸೈಟಿಯು ರೈತರಿಂದ ₹ 2 ಕೋಟಿ ಸಾಲ ವಸೂಲಿ ಮಾಡಿ ತಕ್ಷಣವೇ ಹೊಸ ಸಾಲ ಕೊಡಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖಾತೆ ತೆರೆಯಿರಿ: ‘ರೈತರು, ಮಹಿಳೆಯರು ಶೂನ್ಯ ಬಡ್ಡಿ ಸಾಲ ಸಿಗುತ್ತದೆ ಎಂದು ಡಿಸಿಸಿ ಬ್ಯಾಂಕ್‌ಗೆ ಬರುತ್ತಾರೆ. ಆದರೆ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸುತ್ತಾರೆ. ಈ ಮನೋಭಾವ ಬಿಟ್ಟು ಡಿಸಿಸಿ ಬ್ಯಾಂಕ್‌ನಲ್ಲೇ ವಹಿವಾಟು ನಡೆಸಬೇಕು. ಇಲ್ಲಿಯೇ ಉಳಿತಾಯ ಖಾತೆ ತೆರೆದು ಮತ್ತಷ್ಟು ರೈತರಿಗೆ ನೆರವು ಸಿಗುವಂತಾಗಲು ಸಹಕರಿಸಿ’ ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಮನವಿ ಮಾಡಿದರು.

ರೈತರಿಗೆ ₹ 1.32 ಕೋಟಿ ಬೆಳೆ ಸಾಲ ನೀಡಲಾಯಿತು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್, ವ್ಯವಸ್ಥಾಪಕ ನಿರ್ದೇಶಕ ರವಿ, ಸುಗಟೂರು ಎಸ್‍ಎಫ್‌ಸಿಎಸ್‌ ಅಧ್ಯಕ್ಷ ತಿಮ್ಮರಾಯಪ್ಪ, ಸಿಇಒ ಪುಟ್ಟರಾಜು, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಎ.ಸಿ.ಭಾಸ್ಕರ್, ಗೋಪಾಲಪ್ಪ, ಹನುಮೇಗೌಡ, ವೆಂಕಟರಾಮಪ್ಪ, ವೆಂಕಟಮ್ಮ, ನಾಗೇಂದ್ರಪ್ರಸಾದ್, ಸಂಪತ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT