ಕೊಪ್ಪಳ: ಬರದ ನಾಡಿನಲ್ಲಿ ಆರೋಗ್ಯ ಸೌಲಭ್ಯಗಳಿಗೂ ಕೂಡಾ ಬರ. ದಿನದಿಂದ ದಿನಕ್ಕೆ ಅಪೌಷ್ಟಿಕತೆ, ಶಿಶು, ತಾಯಂದಿರ ಮರಣ ಪ್ರಮಾಣ ಹೆಚ್ಚುತ್ತಿರುವ ಕಾರಣ ಜೀವಕ್ಕೆ ವರದಾನವಾದ ರಕ್ತದಾನ ಮಾಡಲು ಸಮಾನ ಮನಸ್ಕ ಸ್ನೇಹಿತರು ಸೇರಿ 2017ರಲ್ಲಿ ‘ಜೀವದಾನ ಗೆಳೆಯರ ಬಳಗ’ ಸ್ಥಾಪಿಸಿ ಮಾದರಿ ಕಾರ್ಯ ಮಾಡುತ್ತಿದ್ದಾರೆ.
ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ದೊರೆಯದೇ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಮಧ್ಯೆ ರಕ್ತದಾನದ ಮಹತ್ವ ಮತ್ತು ಅದರ ಉದ್ದೇಶವನ್ನು ಜನರಿಗೆ ತಿಳಿಸಿ ರಕ್ತ ನೀಡುವ ಕುರಿತು ಜಾಗೃತಿ ಮೂಡಿಸುವ ಕಾರ್ಯ ಸದ್ದಿಲ್ಲದೆ ಸತತ 4 ವರ್ಷಗಳಿಂದ ನಡೆಯುತ್ತಲೇ ಇದೆ. ಗವಿಸಿದ್ಧೇಶ್ವರ ಕಾಲೇಜಿನಉಪನ್ಯಾಸಕಶಿವನಗೌಡ ಪೊಲೀಸ್ ಪಾಟೀಲ ಅವರಆಶಯ ಮತ್ತು ಕನಸಿನಂತೆ ಬಳಗ ಸ್ಥಾಪನೆಯಾಗಿದೆ. ಇದಕ್ಕೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗಳ ಪ್ರೇರಣೆ ಮತ್ತು ಬೆಂಬಲ ಕೂಡಾ ಸೇರಿದ್ದರಿಂದ ಜೀವದಾನ ಗೆಳೆಯರ ಬಳಗಕ್ಕೆ ಉತ್ತಮ ಸ್ಪಂದನೆ ದೊರೆತಿದೆ.
ಬಳಗದ ಕಾರ್ಯ: ರಕ್ತದಾನ ಮಾಡುವ ವಿಧಾನ, ಯಾರು ರಕ್ತದಾನ ಮಾಡಬೇಕು. ಅದರಿಂದ ಆಗುವ ಉಪಯೋಗ, ರಕ್ತದಾನದ ಕುರಿತು ಇರುವ ಅಪನಂಬಿಕೆ ಹೋಗಲಾಡಿಸುವುದು, ವಿದ್ಯಾರ್ಥಿ, ಯುವಜನ ಮತ್ತು ಆರೋಗ್ಯವಂತರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಬಳಗ ಮಾಡುತ್ತದೆ.
ರಕ್ತದಾನವನ್ನು ರಾಷ್ಟ್ರೀಯ ಅಭಿಯಾನವನ್ನಾಗಿ ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರಕ್ಕೆ 22 ಸಾವಿರ ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಗಾಂಧಿವಾದಿ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಇದಕ್ಕೆ ಚಾಲನೆ ನೀಡಿ, ಪತ್ರ ಚಳವಳಿ ಕೂಡಾ ಮಾಡಲಾಗಿದೆ. 3 ರಿಂದ 4 ಯೂನಿಟ್ ರಕ್ತದ ಬೇಕು ಎಂದು ಜನರು ನಿತ್ಯದೂರವಾಣಿ ಕರೆಮೂಲ
ಕಸಂಪರ್ಕ ಮಾಡುತ್ತಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ರಕ್ತದಾನಿಗಳ ಮಾಹಿತಿ ಸಂಗ್ರಹ, ರಕ್ತದಾನ, ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸಮಾಡಲಾಗುತ್ತದೆ.
ಸಂಗ್ರಹವಾದ ರಕ್ತವನ್ನು ರೆಡ್ಕ್ರಾಸ್, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ರಕ್ತ ಭಂಡಾರ ನಿಧಿಗಳಿಗೆ ನೀಡಲಾಗುತ್ತದೆ. ನಿಯಮಿತವಾಗಿ ರಕ್ತದಾನ ಶಿಬಿರಗಳನ್ನು ಕೂಡಾ ನಡೆಸಲಾಗುತ್ತದೆ.
ಇದಕ್ಕಾಗಿ ಮಹಿಳಾ ಸಂಘ, ಅಕ್ಕನ ಬಳಗವನ್ನು ಕೂಡಾ ಬಳಸಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
‘ಬಹುತೇಕ ಸಂದರ್ಭಗಳಲ್ಲಿ ರಕ್ತದ ಅಲಭ್ಯತೆ ಕಾರಣದಿಂದಾಗಿ ರೋಗಿಗಳು ಮತ್ತು ಗರ್ಭಿಣಿಯರು ಸಾವನ್ನಪ್ಪುತ್ತಿದ್ದಾರೆ.
ಕೃತಕವಾಗಿ ರಕ್ತ ತಯಾರಿಸಲು ಬರುವುದಿಲ್ಲ. ವ್ಯಕ್ತಿ ನೀಡುವ ರಕ್ತವೇ ರೋಗಿಗೆ ವರದಾನ. ಇದರಿಂದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಕಾರಣ ಈ ಕಾರ್ಯವನ್ನು ಆರಂಭಿಸಲಾಗಿದೆ’ ಎನ್ನುತ್ತಾರೆ ಉಪನ್ಯಾಸಕ ಶಿವನಗೌಡ ಪೊಲೀಸ್ ಪಾಟೀಲ.
ರಕ್ತದಾನ ಮಾಡುವವರು ಅವಶ್ಯಕತೆ ಇರುವವರು ನೇರವಾಗಿ ಮೊ.ಸಂಖ್ಯೆ-98456 46370 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.