ಕೊಪ್ಪಳ: ‘ಆಯುರ್ವೇದ ಪುರಾತನ ಕಾಲದಿಂದ ಬಂದಿದ್ದು ಈಗಿನ ದಿನಮಾನದಲ್ಲಿಯೂ ಅದರ ಮಹತ್ವ ಉಳಿದುಕೊಂಡಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಆಹ್ವಾನಿಸಿ ಅವರಿಗೆ ಗರ್ಭಿಣಿ ಆಹಾರ ಪರಿಚಯ ಕೈಪಿಡಿ ನೀಡುವುದರ ಜೊತೆಗೆ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಪ್ರಾತ್ಯಕ್ಷಿಕವಾಗಿ ಪ್ರದರ್ಶಿಸಿದ್ದು ಶ್ಲಾಘನೀಯ’ ಎಂದು ಜಿಲ್ಲಾ ಪಂಚಾಯಿಸಿ ಸಿಇಒ ಬಿ.ಫೌಜಿಯಾ ತರುನ್ನುಮ್ ಹೇಳಿದರು.
ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆಯ ಸ್ವಸ್ಥವೃತ್ತ ಹಾಗೂ ರಸಶಾಸ್ತ್ರ ವಿಭಾಗದಿಂದ ಗುರುವಾರ ನಡೆದ ವಿಶ್ವ ಆಹಾರ ದಿನ ಹಾಗೂ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರೂ ಆಯುರ್ವೇದದ ಮಹತ್ವ ಅರಿತು ಪ್ರಯೋಜನ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಆಯುರ್ವೇದ ಕಾರ್ಯಕ್ರಮಗಳಿಗೆ ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ. ಜಿ. ಮಾತನಾಡಿ ‘ಆಹಾರ ಪದ್ಧತಿ ಕಳೆದುಕೊಳ್ಳುತ್ತಿರುವ ದಿನಮಾನದಲ್ಲಿ ಇಂತಹ ಜನೋಪಯೋಗಿ ಆಯುರ್ವೇದೀಯ ಆಹಾರ ಪ್ರದರ್ಶನಗಳು ಸಾರ್ವಜನಿಕರಿಗೆ ಹಾಗೂ ಮುಖ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಅನುಕೂಲವಾಗುತ್ತವೆ’ ಎಂದರು.
ಪ್ರಾಚಾರ್ಯ ಡಾ. ಬಿ.ಎಸ್. ಸವಡಿ ಮಾತನಾಡಿ ‘ಆಯುರ್ವೇದದಲ್ಲಿ ಆಹಾರಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡಿದ್ದು, ಸ್ವಸ್ಥ ಮತ್ತು ರೋಗಿಗಳಿಗೆ ಆಹಾರ ವಿಧಿ ವಿಧಾನಗಳನ್ನು ಹೇಳಿದ್ದಾರೆ’ ಎಂದರು.
ಡಾ. ಚಂದ್ರಶೇಖರರಡ್ಡಿ ಕರಮುಡಿ, ಸ್ವಸ್ಥವೃತ್ತ ವಿಭಾಗದ ಪ್ರಾಧ್ಯಾಪಕ ಡಾ. ಪ್ರಭು ನಾಗಲಾಪೂರ, ಡಾ. ಕರುಣಾ ಪಾಟೀಲ, ರಸಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಂತೋಷ ಕುಲಕರ್ಣಿ, ಡಾ. ಶಶಿಧರ ಜೀರು, ಡಾ. ರಾಧಾಕೃಷ್ಣ ರೆಡ್ಡಿ ಡಾ. ಶಾಲಿನಿ ಹಾಗೂ ಡಾ. ನವೀನಕುಮಾರ ಇದ್ದರು.