ಗಂಗಾವತಿ: ತಾಲ್ಲೂಕಿನ ಚಿಕ್ಕ ಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಕೆಲಸ ನೀಡಬೇಕು. ರೈತರಿಗೆ ಟ್ರ್ಯಾಕ್ಟರ್ ಬಾಕಿ ಬಾಡಿಗೆಯನ್ನು ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಕೂಲಿಕಾರರು ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆಯ ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರರು ಪಂಚಾಯಿತಿಗೆ ಕೆಲಸಕ್ಕಾಗಿ ಫಾರಂ ನಂ.6 ನ್ನು ತುಂಬಿ ಎರಡು ತಿಂಗಳಾದರೂ ಕೆಲಸ ನೀಡಿಲ್ಲ. ಇದರಿಂದ ಚಿಕ್ಕಜಂತಕಲ್, ವಿನೋಬನಗರ, ನಾಗನಹಳ್ಳಿ, ಅಯೋಧ್ಯ, ಹೊಸಳ್ಳಿ ಗ್ರಾಮದ ಕೂಲಿಕಾರರರು ಕುಟುಂಬ ನಿರ್ವಹಣೆ ಕಷ್ಟಪಡುತ್ತಿದ್ದಾರೆ.
ಕೂಲಿಕಾರರಿಗೆ ಕೆಲಸ ನೀಡಬೇಕು. ಜೊತೆಗೆ ಈ ಹಿಂದೆ ಉದ್ಯೋಗ ಖಾತ್ರಿಯಡಿ ಕೆಲಸ ನಿರ್ವಹಿಸಿದ ರೈತರ ಟ್ರ್ಯಾಕ್ಟರ್ ಬಾಡಿಗೆ ಬಾಕಿ ಇದ್ದು, ಅದನ್ನೂ ಪಾವತಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶ್ರೀನಿವಾಸ ಹೊಸಳ್ಳಿ, ಕನಕರಾಯ, ರಾಮಣ್ಣ, ಶ್ರೀಕಾಂತ, ಟಿ.ಚನ್ನಪ್ಪ, ಹುಲಿಗೆಮ್ಮ, ದ್ಯಾವಮ್ಮ, ಸಾವಿತ್ರಮ್ಮ, ಹೊನ್ನೂರಸಾಬ್ ಸೇರಿದಂತೆ ಕೂಲಿಕಾರರು ಇದ್ದರು.