ಗಂಗಾವತಿ: ಕೊರೊನಾ ಸಂಕಷ್ಟದ ನಡುವೆಯೂ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ‘ಬೆಳಕಿನ ಹಬ್ಬ’ ದೀಪಾವಳಿ ಸಂಭ್ರಮ ಮನೆ ಮಾಡಿದೆ.
ನಗರದ ಮಾರುಕಟ್ಟೆಯಲ್ಲಿ ಶನಿವಾರ ಪೂಜಾ ಸಾಮಗ್ರಿ, ಜವಳಿ, ಆಭರಣ, ಆಕಾಶಬುಟ್ಟಿ, ಹಣತೆ ಹಾಗೂ ಹೂವು–ಹಣ್ಣು ಖರೀದಿ ಭರ್ಜರಿಯಾಗಿ ನಡೆಯಿತು.
ದೀಪಾವಳಿ ಖರೀದಿಗೆ ಹಳ್ಳಿಗಳಿಂದ ಹೆಚ್ಚಿನ ಜನ ಬಂದಿದ್ದ ಕಾರಣ ವಾಹನ ದಟ್ಟಣೆ ಹೆಚ್ಚಾಗಿತ್ತು.
ಗಾಂಧಿಚೌಕ್, ಮಹಾವೀರ ಸರ್ಕಲ್, ಗಣೇಶ ಸರ್ಕಲ್, ಇಸ್ಲಾಂಪುರ ಹಾಗೂ ಗುಂಡಮ್ಮ ಕ್ಯಾಂಪ್ ಮಾರುಕಟ್ಟೆಯ ರಸ್ತೆಯ ಇಕ್ಕೆಲಗಳಲ್ಲಿ ಬಗೆ–ಬಗೆಯ ವಿದ್ಯುತ್ ದೀಪಗಳ ಸರ, ವೈವಿಧ್ಯಮಯ ಆಕಾಶಬುಟ್ಟಿ, ಹಣತೆ, ಚೆಂಡು ಹೂ–ಹಣ್ಣು ಮಾರಾಟ, ಖರೀದಿ ಜೋರಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣು, ತೆಂಗಿನಕಾಯಿ, ಕುಂಬಳಕಾಯಿ ಹಾಗೂ ಆಲಂಕಾರಿಕ ವಸ್ತುಗಳ ಬೆಲೆ ದುಪ್ಪಟ್ಟಾಗಿತ್ತು.
ಲಕ್ಷ್ಮೀ ಪೂಜೆಗೆ ನಗರದ ಬಹುತೇಕ ಅಂಗಡಿ, ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ವ್ಯಾಪಾರಸ್ಥರು ಶಾಮಿಯಾನ, ಚಪ್ಪರ ಹಾಕಿ ಅವುಗಳನ್ನು ವಿದ್ಯುತ್ ದೀಪ ತಳಿರು–ತೋರಣಗಳಿಂದ ಶೃಂಗರಿಸುತ್ತಿದ್ದ ದೃಶ್ಯ ಕಂಡುಬಂತು.