ಗಂಗಾವತಿ: ಆಫ್ರಿಕಾ ಖಂಡದ ಲಿಬೇರಿಯಾ ದೇಶದಲ್ಲಿ ಎಂಜಿನಿಯರ್ ಕೆಲಸಕ್ಕೆ ತೆರಳಿರುವ ಇಲ್ಲಿಯ ಎಚ್.ಎನ್.ಆರ್ ಕಾಲೊನಿ ನಿವಾಸಿ ಮೆಹಬೂಬ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲಸದ ಸ್ಥಳದಲ್ಲಿ ತಾವು ತೊಂದರೆಗೆ ಸಿಲುಕಿರುವುದರಿಂದ ನೆರವಿಗೆ ಧಾವಿಸುವಂತೆ ಅವರು ಮೊರೆ ಇಟ್ಟಿದ್ದಾರೆ.
ಡಿಪ್ಲೊಮಾ ಓದಿರುವ ಅವರು, ಕೆಲ ತಿಂಗಳ ಹಿಂದೆ ಮುಂಬೈ ಕಂಪನಿಯ ಮೂಲಕ ಲಿಬೇರಿಯಾಗೆ ಕೆಲಸಕ್ಕೆ ತೆರಳಿದ್ದರು. ಅಲ್ಲಿ ಕಂಪನಿಯೊಂದರಲ್ಲಿ ಜೆಸಿಬಿ, ಲೋಡರ್, ಹಿಟಾಚಿಗಳ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
‘ಕಂಪನಿಯವರು ರಜೆ ನೀಡದೆ, ನಿರಂತರವಾಗಿ ಕೆಲಸ ಮಾಡಿಸುತ್ತಿದ್ದಾರೆ.ಐದು ತಿಂಗಳಿಂದ ವೇತನ ನೀಡಿಲ್ಲ.ಕೆಲಸ ನಿರ್ವಹಿಸಲು ಗುಡ್ಡಗಾಡು ಪ್ರದೇಶಕ್ಕೇ ಕಳಿಸುತ್ತಿದ್ದಾರೆ. ಸರಿಯಾದ ಆಹಾರವನ್ನೂ ಕೊಡುತ್ತಿಲ್ಲ’ ಎಂದುಮೆಹಬೂಬ್ ವಿಡಿಯೊ ಮಾಡಿ ಅಲವತ್ತುಕೊಂಡಿದ್ದಾರೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ.
‘ಇಲ್ಲಿನ ಒತ್ತಡವನ್ನು ನಿಭಾಯಿಸಲು ಆಗುತ್ತಿಲ್ಲ, ಹೇಗಾದರೂ ಮಾಡಿ, ಭಾರತಕ್ಕೆ ಕರೆಸಿಕೊಳ್ಳುವಂತೆ ಗೋಗರೆದಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ.ಆ. 22 ರನಂತರ ಬರುವುದಾಗಿ ತಿಳಿಸಿದ್ದ. ಆದರೆ, ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದು ಅವರ ಸಹೋದರಅಯೂಬ್ ಶೇಖ ಮೆಹಬೂಬ್ ಸಾಬ್ ಹೇಳಿದರು.
ಏಮ್ ಇಂಡಿಯಾ ಫೋರಂ ಸಂಸ್ಥೆ ನೆರವು: ‘ಸಾಮಾಜಿಕ ಜಾಲತಾಣದ ಮೂಲಕ ಕರ್ನಾಟಕದವರೇ ಸ್ಥಾಪಿಸಿರುವ ಏಮ್ ಇಂಡಿಯಾ ಫೋರಂ ಸಂಸ್ಥೆಗೆ ಮೆಹಬೂಬ್ ಸಂಪರ್ಕಿಸಿ, ತಮ್ಮ ನೆರವಿಗೆ ಧಾವಿಸುವಂತೆ ಲಿಬೇರಿಯಾ ದೇಶದಲ್ಲಿನ ಭಾರತದ ರಾಯಭಾರಿಗೆಮನವಿ ಮಾಡಿಕೊಂಡಿದ್ದಾನೆ. ಅವರನ್ನು ಸುರಕ್ಷಿತವಾಗಿ ಭಾರತ ದೇಶಕ್ಕೆ ಕರೆತರುವ ಕೆಲಸವನ್ನು ಸಂಸ್ಥೆಯ ಅಧ್ಯಕ್ಷ ಶಿರಾಲಿ ಶೇಖ್ ಮುಜಾಫರ್ ಮಾಡಲಿದ್ದಾರೆ' ಎಂದು ಫೋರಂಪ್ರಧಾನ ಕಾರ್ಯದರ್ಶಿಯಾಸೀರ್ ಅರಾಫತ್ ಮಕಾನದಾರ ತಿಳಿಸಿದ್ದಾರೆ.