ಕೊಪ್ಪಳ: ನಗರದ ಹೋಟೆಲ್ನಲ್ಲಿ ಶನಿವಾರ ರಾತ್ರಿ ನಡೆದ ಜನ್ಮದಿನದ ಕಾರ್ಯಕ್ರಮದ ಖುಷಿ ಕೇವಲ ಒಂದು ತಾಸಿನೊಳಗೆ ಕರಗಿ ಹೋಯಿತು.
ಜನ್ಮದಿನದ ಸಂಭ್ರಮಾಚರಣೆಯಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡಿದ್ದ ಹಿರಿಯರು ಹಾಗೂ ಮಕ್ಕಳು ಎಲ್ಲರೂ ಒಟ್ಟಿಗೆ ಊಟ ಮಾಡಿದ್ದರು. ಕುಟುಂಬದವರೆಲ್ಲ ಸೇರಿ ಫೋಟೊ ತೆಗೆಯಿಸಿಕೊಂಡಿದ್ದರು. 10.30ರ ಸುಮಾರಿಗೆ ಕಾರ್ಯಕ್ರಮ ಮುಗಿದಿದ್ದು, ಮುಂದಿನ ಅರ್ಧ ಗಂಟೆಯಲ್ಲಿಯೇ ಅಪಘಾತ ನಡೆದಿದೆ.
ಅಪಾಯಕಾರಿ ರಸ್ತೆ ಎನ್ನುವ ಕಾರಣಕ್ಕೆ ಬಿನ್ನಾಳ ಗ್ರಾಮದಿಂದ ಬಂದಿದ್ದ ಒಂಬತ್ತು ಜನ ಊಟ ಮುಗಿಸಿಕೊಂಡವರೇ ಊರಿಗೆ ವಾಪಸ್ ಹೊರಟಿದ್ದರು. ಅವರಲ್ಲಿ ಐದು ಜನ ಜಿಲ್ಲೆಯ ಭಾನಾಪುರ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಆಕ್ರಂದನ: ಘಟನಾ ಸ್ಥಳಕ್ಕೆ ಬಂದ ಕುಟುಂಬದವರು ಹಾಗೂ ಬಿನ್ನಾಳ ಗ್ರಾಮಸ್ಥರು ಮೃತ ದೇಹಗಳನ್ನು ಕಂಡು ತತ್ತರಿಸಿ ಹೋದರು. ಹಲವರು ಜಿಲ್ಲಾಸ್ಪತ್ರೆಗೆ ಬಂದರೆ, ಇನ್ನು ಕೆಲವರು ಶವಪರೀಕ್ಷೆ ನಡೆಯಲಿರುವ ಕುಕನೂರು ತಾಲ್ಲೂಕು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.
ಮೃತಪಟ್ಟ ದೇವಪ್ಪ ಕೊಪ್ಪದ ಅವರ ಪುತ್ರ ಶಿವು ಕೊಪ್ಪದ ಮಾತನಾಡಿ ‘ಮನೆ ಸ್ಮಶಾನವಾಗಿ ಹೋಯ್ತು. ಆ ದೇವರಿಗೆ ಕರುಣೆಯೇ ಇಲ್ಲ’ ಎಂದು ಬಿಕ್ಕಿ ಬಿಕ್ಕಿ ಅತ್ತರು.