ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ: ಹುಲಿಗಿ- ಹಿಟ್ನಾಳ ಹೊಸ ಸೇತುವೆಗೆ ಅನುಮೋದನೆ

ಸಂಚಾರ ದಟ್ಟಣೆ: ಹುಲಿಗಿ- ಹಿಟ್ನಾಳ ಹೊಸ ಸೇತುವೆಗೆ ಅನುಮೋದನೆ
Last Updated 4 ಆಗಸ್ಟ್ 2021, 5:46 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಹಾದು ಹೋಗಿರುವ ಹುಬ್ಬಳ್ಳಿ-ಬಳ್ಳಾರಿ ರೈಲ್ವೆ ಮಾರ್ಗದ ಉದ್ದಕ್ಕೂ ಬರುವ ರೈಲ್ವೆಗೇಟ್‌ಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ 14 ರೈಲು ಗೇಟ್‌ಗಳಿಗೆ ರೈಲು ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಸಂಚಾರ ವ್ಯವಸ್ಥೆ ಸುಗಮಕ್ಕೆ ಶೀಘ್ರದಲ್ಲಿ ಪರಿಹಾರ ದೊರೆಯಲಿದೆ.

ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಬೃಹತ್ ಉದ್ಯಮಗಳು ಇದ್ದು, ಪ್ರಯಾಣಿಕರ ರೈಲಿಗಿಂತ ಸರಕು ಸಾಗಿಸುವ 20ಕ್ಕೂ ಹೆಚ್ಚು ರೈಲುಗಳು ನಿತ್ಯ ಓಡಾಟ ನಡೆಸುತ್ತಿವೆ. ಇದರಿಂದ ನಗರದ ವಿವಿಧ ಕ್ರಾಸಿಂಗ್‌ ಗೇಟ್‌ಗಳಲ್ಲಿ ಅರ್ಧ ಗಂಟೆ ಕಾಯಬೇಕಿರುವುದರಿಂದ ಸಂಚಾರ ದಟ್ಟಣೆ, ಪ್ರಯಾಣ ವಿಳಂಬದಿಂದ ಪ್ರಯಾಣಿಕರು ಬೇಸತ್ತು ಹೋಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಒಟ್ಟು 14 ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ₹ 216.13 ಕೋಟಿ ಹಣ ಬಿಡುಗಡೆಯಾಗಿದೆ. ಇದರಲ್ಲಿ ಭಾಗ್ಯನಗರ ಮೇಲ್ಸೇತುವೆ, ಕಿನ್ನಾಳ ಕೆಳ ಸೇತುವೆಯನ್ನು ಕ್ರಮವಾಗಿ ₹ 20.32 ಕೋಟಿ, ₹ 6.70 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಪೂರ್ಣಗೊಳಿಸಲಾಗಿದ್ದು, ಸಾರ್ವಜನಿಕರ ಮತ್ತು ವಾಹನಗಳ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.

ಗದಗದಿಂದ ಕೊಪ್ಪಳ ಜಿಲ್ಲೆ ಯನ್ನು ಪ್ರವೇಶಿಸುವ ₹ 9.23 ಕೋಟಿ ವೆಚ್ಚದ ಬನ್ನಿಕೊಪ್ಪ-ಇಟಗಿ ಕೆಳಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಯಿಂದ ಭಾನಾಪುರ-ಕುಕನೂರು ಮೇಲುಸೇತುವೆ ₹ 59.33 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಹಲಗೇರಿ, ಮಾದಿನೂರು ಸೇತುವೆಗಳ ನಿರ್ಮಾಣಕ್ಕೆ ಮನವಿ ಮಾಡಲಾಗಿದ್ದು, ಇನ್ನೂ ಸಮೀಕ್ಷೆ ನಡೆಯಬೇಕಿದೆ.

ನಗರದ ಮಧ್ಯಭಾಗದ ಸ್ವಾಮಿ ವಿವೇಕಾನಂದ ಶಾಲೆಯ ಬಳಿ ಯತ್ನಟ್ಟಿ-ಓಜನಹಳ್ಳಿ ಕೆಳ ಸೇತುವೆಗೆ ₹ 4.01 ಕೋಟಿ ಅನುಮೋದನೆ ನೀಡಿದ್ದು, ಯೋಜನೆ ಪ್ರಗತಿಯಲ್ಲಿದೆ. ಕೆಇಬಿ ಹತ್ತಿರ ಸಬ್‌ ವೇ ನಿರ್ಮಾಣಕ್ಕೆ ₹ 4 ಕೋಟಿ ಮಂಜೂರಾಗಿದ್ದು, ಕಾಮಗಾರಿ ನಡೆಯಬೇಕಿದೆ.

ಅತ್ಯಂತ ಮಹತ್ವದ ಸೇತುವೆಯಾದ ಕುಷ್ಟಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ₹ 23.65 ಕೋಟಿ ಮಂಜೂರು ಮಾಡಲಾಗಿದ್ದು, ಅಂತಿಮ ಹಂತದ ಟೆಂಡರ್ ಆಗಿದೆ. ಕಿಡದಾಳ ಸೇತುವೆ ನಿರ್ಮಾಣಕ್ಕೆ ₹ 34 ಕೋಟಿಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗಿಣಗೇರಾ ಮೇಲ್ಸೇತುವೆ ನಿರ್ಮಾಣಕ್ಕೆ ₹ 25.86 ಕೋಟಿ ನಿಗದಿಪಡಿಸಲಾಗಿದ್ದು, ಯೋಜನಾ ತಯಾರಿಕೆ ಮಾಡಬೇಕಾಗಿದೆ.

ಹುಲಿಗಿಗೆ ನಿತ್ಯ ಸಾವಿರಾರು ಭಕ್ತರು ಬರುವ ಹಿನ್ನೆಲೆಯಲ್ಲಿ ಹೊಸಳ್ಳಿ ಟೋಲ್‌ ಸಮೀಪದ ಹಿಟ್ನಾಳ- ಅಗಳಕೇರಾ ರಸ್ತೆಯಲ್ಲಿ ಇರುವ ರೈಲ್ವೆ ಗೇಟ್‌ 76, 77ರಲ್ಲಿ ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರ ಮತ್ತು ಗ್ರಾಮಸ್ಥರ ಬೇಡಿಕೆ ಇದೆ. ಇಲ್ಲಿ ಹುಣ್ಣಿಮೆ ಮತ್ತು ವಿಶೇಷ ದಿನಗಳಂದು ಸಾವಿರಾರು ವಾಹನಗಳು ರಸ್ತೆಯಲ್ಲಿ ನಿಲ್ಲುವುದರಿಂದ 6 ಕಿ.ಮೀ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಹುಲಿಗಿ- ಮುನಿರಾಬಾದ್‌ ಮೇಲ್ಸೇತುವೆ ನಿರ್ಮಾಣಕ್ಕೆ ₹ 29.63 ಕೋಟಿಗೆ ಅನುಮೋದನೆ ದೊರೆತಿದ್ದು, ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಈ ಕುರಿತು ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆ ಭಾಗದ ಸಂತ್ರಸ್ತರಾಗುವ ರೈತರ ಸಭೆ ಹಮ್ಮಿಕೊಳ್ಳಲಾಗಿತ್ತು. ಸರ್ಕಾರ ಜಮೀನಿನ ಬೆಲೆ ನಿಗದಿ ಮಾಡುವುದು ದರ ಕಡಿಮೆ ಇದೆ ಎಂಬ ರೈತರ ಅಸಮಾಧಾನವಿದೆ. ಪ್ರಸ್ತುತ ಮಾರುಕಟ್ಟೆ ದರದಲ್ಲಿ ಬೆಲೆ ನೀಡಿ ಖರೀದಿಸಬೇಕು ಎಂಬ ಮನವಿ ರೈತರಾದಾಗಿದೆ.

ಸೇತುವೆ- ಸುರಕ್ಷತೆ: ಭಾಗ್ಯನಗರದಿಂದ ಬರುವ ಜನ ನಿಲ್ದಾಣಗಳಲ್ಲಿ ನಿಲ್ಲುತ್ತಿದ್ದ 60ಕ್ಕೂ ಹೆಚ್ಚು ಬೋಗಿಗಳನ್ನು ಒಳಗೊಂಡ ರೈಲುಗಳ ಅಡಿಯಲ್ಲಿ ಹಾಯ್ದು ಬರುತ್ತಿದ್ದರು. ಕೆಲವೊಮ್ಮೆ ರೈಲು ಚಲಿಸುವುದು ಗೊತ್ತಾಗದೇ ಜೀವಕ್ಕೆ ಕುತ್ತು ತಂದುಕೊಂಡಿದ್ದು, ಉಂಟು. ಅಲ್ಲದೆ ನಗರದ ಮಧ್ಯದ ಹಳಿಗಳ ಮೇಲೆ ಎಚ್ಚರಿಕೆ ಇಲ್ಲದೆ ಸಂಚಾರದಿಂದ ಅನೇಕರು ಜೀವ ಕಳೆದುಕೊಂಡಿದ್ದರು.

ಕಿನ್ನಾಳ ಸೇತುವೆಯದ್ದು ಇನ್ನೊಂದು ಕಥೆ. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಮಳೆಗಾಲದಲ್ಲಿ ನಿತ್ಯ ನೀರು ನಿಂತು ಸಂಚಾರಕ್ಕೆ ಭಯಪಡುವಂತೆ ಆಗುತ್ತದೆ. ನೀರು ಹೋಗಲು ವ್ಯವಸ್ಥೆ ಮಾಡಬೇಕಾದ ಸ್ಥಳೀಯ ಸಂಸ್ಥೆಗಳಿಗೆ ಅನೇಕ ಸಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುವುದು ನಾಗರಿಕರ ದೂರು.

'ಕೊಪ್ಪಳ ಮತ್ತು ಭಾಗ್ಯನಗರ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಾಯ್ದುಹೋಗುವ ಎಲ್ಲ ರೈಲ್ವೆಗೇಟ್‌ಗಳಿಗೆ ಸೇತುವೆ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆ ಹಿನ್ನೆಲೆಯಲ್ಲಿ ಅನೇಕ ಪ್ರಗತಿಯಾಗುತ್ತಿದೆ' -ಸಂಗಣ್ಣ ಕರಡಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT