ಕೊಪ್ಪಳ: ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ನಾಲ್ಕು ವರ್ಷದಿಂದ ಅಂಚೆ ಇಲಾಖೆಗೆ ಬಂದ ಯಾವುದೇ ಪತ್ರ, ನೋಟಿಸ್, ನೇಮಕಾತಿ ಆದೇಶ, ಮಾಸಾಶನ ಪತ್ರಗಳು ಸೇರಿದಂತೆ ಮಹತ್ವದ ದಾಖಲೆ ವಿಲೇವಾರಿ ಮಾಡದ ಅಂಚೆಪಾಲಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಇಲಾಖೆ ಉನ್ನತ ಅಧಿಕಾರಿಗಳುಚಿಂತನೆ ನಡೆಸಿದ್ದಾರೆ.
ಈ ಘಟನೆ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಅಂಚೆಪಾಲಕಸುರೇಶ ತಳವಾರನ ಮಾನಸಿಕ ವರ್ತನೆ ಬಗ್ಗೆ ಸಂಶಯ ಉಂಟಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಯಲ್ಲಿ ಮಂಜೂರಾದ ಹಣ, ಸತ್ತವರ ಸುದ್ದಿ, ಯೋಗಕ್ಷೇಮ ಸಮಾಚಾರದ ಪತ್ರಗಳು, ಸ್ಪೀಡ್ ಪೋಸ್ಟ್, ತುರ್ತು ಸಂದೇಶವುಳ್ಳ ಅಂಚೆಯನ್ನು ಸಹ ಸಂಬಂಧಿಸಿದ ಜನರಿಗೆ ತಲುಪಿಸದ ಅಂಚೆ ಪಾಲಕ ಸುರೇಶ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಗ್ರಾಮಸ್ಥರು ಕೊಪ್ಪಳ,ಯಲಬುರ್ಗಾ ಮತ್ತು ಹುಬ್ಬಳ್ಳಿ ಕಚೇರಿಗೆ ದೂರು ನೀಡಿದ್ದಾರೆ. ಈ ಕುರಿತು ಗದಗ ಅಂಚೆ ವೃತ್ತ ಅಧೀಕ್ಷಕ ಕೆ.ಬಸವರಾಜ ಮಾತನಾಡಿ, 'ಇಲಾಖೆಯಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ. ಹಗಲು-ರಾತ್ರಿ ಕಷ್ಟಪಟ್ಟು ಈ ಪುರಾತನ ಇಲಾಖೆಯನ್ನು ಆಧುನಿಕತೆಗೆ ತಕ್ಕಂತೆ ಶ್ರಮವಹಿಸಿ ಸಿಬ್ಬಂದಿ ಕಟ್ಟಿದ್ದಾರೆ. ಉತ್ತಮ ಸೇವೆ ಮಾಡುವ ಮೂಲಕ ಜನತೆಗೆ ಅಗತ್ಯ ಸೌಲಭ್ಯ ಮುಟ್ಟಿಸಿ ಇಲಾಖೆ ಮೇಲೆ ವಿಶ್ವಾಸ ಬರುವಂತೆ ಮಾಡಿದ್ದಾರೆ. ಈ ಒಬ್ಬ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಆಘಾತವಾಗಿದೆ' ಎಂದು ಅವರು ಪ್ರತಿಕ್ರಿಯಿಸಿದರು.
'ಸುರೇಶ ತಳವಾರ ವಿರುದ್ಧ ನಿಸ್ಸಂಶಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಲಾಗುವುದು. ಮಂಗಳವಾರ ರಜೆ ಇದ್ದುದ್ದರಿಂದ ತನಿಖೆ ನಡೆಸಿರಲಿಲ್ಲ. ಬುಧವಾರ ವಿಸ್ತೃತವಾಗಿ ತನಿಖೆ ನಡೆಸಲಾಗುವುದು. ದಾಖಲೆಗಳನ್ನು ಕೊಪ್ಪಳ ಅಂಚೆ ಕಚೇರಿಗೆ ತಂದು ಪರಿಶೀಲನೆ ನಡೆಸಲಾಗುವುದು. ದುರಪಯೋಗವಾದ ಹಣ, ಮಹ್ವತದ ಕಾಗದಪತ್ರ ವಿತರಣೆ ಮಾಡದೇ ಆಗಿರುವ ಹಾನಿಯನ್ನು ಅಂದಾಜಿಸಿ ಸಮಗ್ರ ವರದಿ ಸಲ್ಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.
ಅಂಚೆ ಇಲಾಖೆ ಅಧಿಕಾರಿ ವಿಜಯಕುಮಾರ ಹುಬ್ಬಳ್ಳಿ ಈ ಕುರಿತು ಪರಿಶೀಲನೆಗೆ ಬಂದಾಗಲೇ ನೂರಾರು ಕಾಗದಪತ್ರಗಳು ಹಾಗೆ ಉಳಿದಿರುವುದು ಕಂಡು ಬಂತು. ಇದರಿಂದ ಆಘಾತಗೊಂಡ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.