ಯಲಬುರ್ಗಾ: ‘ಕಾರ್ತಿಕೋತ್ಸವ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ತರಲಿ. ಕೊರಾನಾ ದೂರವಾಗಲಿ’ ಎಂದು ಗದಗಿನ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಹೇಳಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದ ಕಲ್ಲಿನಾಥೇಶ್ವರ ಕಾರ್ತಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದರು.
ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ,‘ಪ್ರತಿವರ್ಷ ಕಾರ್ತಿಕೋತ್ಸವವನ್ನು ವೈಭವದಿಂದ ಆಚರಿಸಲಾಗುತ್ತಿತ್ತು. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿದೆ. ಭಕ್ತರಲ್ಲಿ ಹುಮ್ಮಸ್ಸು, ಶ್ರದ್ಧಾಭಕ್ತಿ ಕಡಿಮೆಯಾಗಿಲ್ಲ’ ಎಂದು ಹೇಳಿದರು.
ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಮಾದರಿ ಕಾರ್ಯ. ಇದೇ ಗ್ರಾಮದ ಉದ್ಯಮಿ ಸಮಾಜ ಸೇವಕ ಕಳಕನಗೌಡ ಪಾಟೀಲ ಜುಮ್ಲಾಪುರ ಅವರು ತಾಲ್ಲೂಕಿನಾದ್ಯಂತ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ. ಇವರ ಸೇವೆಯನ್ನು ನಾಡಿನ ಜನತೆ ಗುರುತಿಸಿ ಕೊಂಡಾಡುತ್ತಿದ್ದಾರೆ ಎಂದರು.
ಜಿಲ್ಲಾ ವೀರೇಶೈವ ಮಹಾಸಭಾದ ಅಧ್ಯಕ್ಷ ಕಳಕನಗೌಡ ಪಾಟೀಲ ಮಾತನಾಡಿ,‘ಬಡವನಾಗಿ ಹುಟ್ಟಿ ತೀರಾ ಕಷ್ಟಪಟ್ಟು ಮೇಲಕ್ಕೆ ಬಂದಿದ್ದೇನೆ. ಬಡತನದ ಅರಿವಿದೆ. ಬಡತನದಿಂದ ಓದುವ ಭಾಗ್ಯ ಸಿಗಲಿಲ್ಲ. ಅದಕ್ಕಾಗಿ ಹೆಚ್ಚಿನ ಅಂಕಗಳಿಸುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಶೈಕ್ಷಣಿಕ ಸುಧಾರಣೆಗೆ ಆಸಕ್ತಿ ತೋರಿಸುತ್ತಿದ್ದೇನೆ’ ಎಂದರು.
ಕಲ್ಲೂರಿನ ಹಿರೇಮಠದ ವೀರಯ್ಯಜ್ಜನವರು ಸಾನಿಧ್ಯ ವಹಿಸಿದ್ದರು. ಬೆಂಗಳೂರಿನ ಕರ್ನಾಟಕ ಸ್ವಾಭಿಮಾನಿ ವೇದಿಕೆ ಕಾರ್ಯದರ್ಶಿ ಶಂಕರ ಹೂಗಾರ, ರುದ್ರಗೌಡ ಸೊಲಬಗೌಡ್ರು, ಮಂಜುನಾಥ ಕುರಿ ಹಾಗೂ ಸಂತೋಷ ಕಾಯಿಗಡ್ಡಿ ಇದ್ದರು.