ತಾವರಗೇರಾ: ಇಲ್ಲಿನ ನಿವಾಸಿ ಶಕುಂತಲಾ ನಾಲತವಾಡ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಿಕೊಂಡಿರುವ ಮನೆಗೆ ‘ರಾಷ್ಟ್ರೀಯ ಪುರಸ್ಕಾರ’ ಲಭಿಸಿದೆ.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಕುಟುಂಬಕ್ಕೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.
‘ಪಟ್ಟಣದ ಶಕುಂತಲಾ ಮಲ್ಲಪ್ಪ ನಾಲತವಾಡ ಕುಟುಂಬ 2016–17ರಲ್ಲಿ ಮನೆ ನಿರ್ಮಿಸಿಕೊಂಡಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಉತ್ತಮ ಮನೆ ನಿರ್ಮಿಸಿಕೊಂಡವರಿಗೆ ರಾಷ್ಟ್ರೀಯ ಪುರಸ್ಕಾರ ನೀಡುತ್ತದೆ. ರಾಜ್ಯದ ಮೂರು ಕುಟುಂಬಗಳು ಆಯ್ಕೆಯಾಗಿವೆ. ಅದರಲ್ಲಿ ಶಕುಂತಲಾ ಅವರ ಕುಟುಂಬವೂ ಒಂದು. ಖುಷಿಯಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಂಕರ ಕಾಳೆ ತಿಳಿಸಿದರು.
‘ನಮ್ಮ ಕುಟುಂಬಕ್ಕೆ ರಾಷ್ಟ್ರೀಯ ಪುರಸ್ಕಾರ ಸಿಕ್ಕಿರುವುದು ಸಂತಸ ತಂದಿದೆ. ಸರ್ಕಾರದ ಅನುದಾನದ ಜತೆಗೆ ಸ್ವಂತ ಹಣ ಬಳಸಿ ಮನೆ ನಿರ್ಮಿಸಿಕೊಂಡಿದ್ದೇವೆ’ ಎಂದು ಫಲಾನುಭವಿ ಶಕುಂತಲಾ ಅವರ ಪತಿ ಮಲ್ಲಪ್ಪ ನಾಲತವಾಡ ಹೇಳಿದರು.
‘ಮನೆ ನಿರ್ಮಾಣಕ್ಕೆ ಮತ್ತು ಈ ಪ್ರಶಸ್ತಿ ಲಭಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸಹಕಾರ ನೀಡಿದ್ದಾರೆ. ಜನರು ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು’ ಎಂದರು.
ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ ವಿಕ್ರಮ್ ರಾಯ್ಕರ್ ಮಾತನಾಡಿ,‘ಪ.ಪಂ ಮತ್ತು ತಾವರಗೇರಾ ಪಟ್ಟಣವನ್ನು ದೇಶಕ್ಕೆ ಪರಿಚಯಿಸುವ ಮೂಲಕ ಕೀರ್ತಿ ತಂದಿರುವ ಕುಟುಂಬಕ್ಕೆ ರಾಷ್ಟ್ರೀಯ ಪುರಸ್ಕಾರ ಸಿಕ್ಕಿರುವುದು ಸಂತಸ ತಂದಿದೆ. ಇತರ ಕುಟುಂಬಗಳೂ ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು’ ಎಂದರು.
ಕೊಪ್ಪಳ ಜಿಲ್ಲಾ ಯೋಜನಾ ನಿರ್ದೇಶಕ ಮತ್ತು ಮಾನ್ಯ ಜಿಲ್ಲಾಧಿಕಾರಿ, ತಾವರಗೇರಾ ಪ.ಪಂ ಮುಖ್ಯಾಧಿಕಾರಿ ಶಂಕರ ಕಾಳೆ, ಜಿಲ್ಲಾ ನಗರಾಭಿವೃದ್ಧಿ ತಜ್ಞ, ಪ.ಪಂ ಆರೋಗ್ಯ ಅಧಿಕಾರಿ ಪ್ರಾಣೇಶ , ಶ್ಯಾಮೂರ್ತಿ ಕಟ್ಟಿಮನಿ ಮತ್ತು ಕುಟುಂಬದ ಸದಸ್ಯರು ಇದ್ದರು.