ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ, ಚರಂಡಿ ನೀರು ಸೇರ್ಪಡೆ, ಪ್ಲಾಸ್ಟಿಕ್ ಚೀಲಗಳ ಹಾವಳಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯು ಅಂಚಿನಲ್ಲಿ ಹೇರಳ ಮದ್ಯದ ಬಾಟಲ್ಗಳನ್ನು ಬಿಸಾಡಲಾಗಿದೆ. ಹುಲಿಗಿಯಲ್ಲಿ ಜನ ಸ್ನಾನಮಾಡಿ ಬಿಸಾಡಿದ ಬಟ್ಟೆಗಳು ನದಿಯನ್ನು ಕಲುಷಿತಗೊಳಿಸಿವೆ. ಜಲಜಾಗೃತಿ ಹಾಗೂ ಜನಜಾಗೃತಿಗಾಗಿ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಮತ್ತು ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ತುಂಗಾ ಹಾಗೂ ಭದ್ರಾ ನದಿ ಹರಿಯುವ ಮಾರ್ಗದ ಸಮೀಪದಲ್ಲಿ ಎರಡು ಹಂತಗಳಲ್ಲಿ ಶೃಂಗೇರಿಯಿಂದ ಗಂಗಾವತಿ ತನಕ ನಿರ್ಮಲ ತುಂಗಭದ್ರಾ ಅಭಿಯಾನ ನಡೆಸಿ ಜಾಗೃತಿ ಮೂಡಿಸಿದೆ. ಮೂರನೇ ಹಂತದ ಪಾದಯಾತ್ರೆ ಡಿಸೆಂಬರ್ 27ರಿಂದ ಗಂಗಾವತಿಯಿಂದ ಆರಂಭವಾಗಲಿದೆ. ಇಷ್ಟೆಲ್ಲ ಜಲಜಾಗೃತಿ ಕೆಲಸ ನಡೆದರೂ ತುಂಗಭದ್ರಾ ಮಲೀನವಾಗುತ್ತಲೇ ಇದೆ. ಪಾದಯಾತ್ರೆಯಲ್ಲಿ ತಂಡ ಕಂಡುಕೊಂಡ ಅಂಶಗಳನ್ನು ಆಧರಿಸಿ ಪ್ರಮೋದ ಕುಲಕರ್ಣಿ ವಿಶೇಷ ವರದಿ ಬರೆದಿದ್ದಾರೆ.