ಶ್ರೀರಂಗಪಟ್ಟಣ: ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಯುವ ರೈತ ನವೀನ್ ತಮ್ಮ ಒಂಟಿ ಎತ್ತನ್ನು ತಮಿಳುನಾಡಿನ ಕೊಯಮತ್ತೂರು ಸಮೀಪದ ಸರವಣಂಪಟ್ಟಿ ಗ್ರಾಮದ ಸಿರವೈ ತಂಬಿ ಅವರಿಗೆ ಬುಧವಾರ ₹ 9.20 ಲಕ್ಷಕ್ಕೆ ಮಾರಾಟ ಮಾಡಿದರು. ಊರಿನಲ್ಲಿ ಮೆರವಣಿಗೆ ಮಾಡಿ ಬೀಳ್ಕೊಟ್ಟರು.
ಎರಡು ಹಲ್ಲಿನ, ಎರಡೂವರೆ ವರ್ಷ ಪ್ರಾಯದ ಎತ್ತು ಎತ್ತಿನ ಗಾಡಿ ಓಟದ ಹತ್ತಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದೆ. ಚಿರತೆ ವೇಗದಲ್ಲಿ ಓಡುತ್ತದೆಂದು ನವೀನ್ ಅವರು ‘ಜಾಗ್ವಾರ್’ ಎಂದು ಹೆಸರಿಟ್ಟಿದ್ದಾರೆ. ಅದೇ ಕಾರಣಕ್ಕೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ‘ಜಾಗ್ವಾರ್ ನವೀನ್’ ಎಂದೇ ಹೆಸರಾಗಿದ್ದಾರೆ.
‘ಒಂದೂವರೆ ವರ್ಷದ ಹಿಂದೆ ₹1.5 ಲಕ್ಷ ಕೊಟ್ಟು ಇಂಡುವಾಳು ಗ್ರಾಮದ ಅಜಿತ್ ಎಂಬವವರಿಂದ ಎತ್ತನ್ನು ಖರೀದಿಸಿದ್ದೆ. ಪೌಷ್ಟಿಕ ಆಹಾರ ಕೊಟ್ಟು ಎತ್ತಿನ ಗಾಡಿ ಓಟದ ಸ್ಪರ್ಧೆಗೆ ತರಬೇತಿ ನೀಡಿದ್ದೆ. ಹೊರ ರಾಜ್ಯದ ಸ್ಪರ್ಧೆಗಳಲ್ಲಿ ಕೂಡ ಬಹುಮಾನ ಗೆದ್ದು ಕೊಟ್ಟಿತ್ತು. ಭಾರವಾದ ಮನಸ್ಸಿನಿಂದಲೇ ಮಾರಾಟ ಮಾಡುತ್ತಿದ್ದೇನೆ‘ ಎಂದು ನವೀನ್ ಹೇಳಿದರು.
‘ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಅದರ ವೇಗ ನೋಡಿ ಮೆಚ್ಚಿಕೊಂಡು ಖರೀದಿಸಿದೆ’ ಎಂದು ಸಿರವೈ ತಂಬಿ ತಿಳಿಸಿದರು.