ಮಂಡ್ಯ: ನಾಲೆಗಳಲ್ಲಿ ನೀರು ಹರಿಯುತ್ತಿದ್ದು ರೈತರು ಭತ್ತದ ನಾಟಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲೂ ಬಿತ್ತನೆ ಚಟುವಟಿಕೆ ಚುರುಕುಗೊಂಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಾಲೆಗಳಿಗೆ ನೀರಿನ ಕೊರತೆಯಾಗಿಲ್ಲ. ಕೆಆರ್ಎಸ್ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿರುವ ಕಾರಣ ಬೆಳೆದು ನಿಂತಿರುವ ಬೆಳೆಗೂ ತೊಂದರೆ ಇಲ್ಲ. ಈಗಾಗಲೇ ಕೆಲವೆಡೆ ಭತ್ತದ ನಾಟಿ ಆರಂಭವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ವರ್ಷ ನೀರಿನ ಸಮಸ್ಯೆಯಿಂದಾಗಿ ನಾಲೆಗಳಿಗೆ ನೀರು ಬಿಡುವುದು ತಡವಾಗಿತ್ತು. ಆದರೆ ಈ ವರ್ಷ ಕನ್ನಂಬಾಡಿ ಕಟ್ಟೆ ಭರ್ತಿಯ ಹಂತ ತಲುಪಿದ್ದು ಗದ್ದೆಗಳಲ್ಲಿ ಸಾಕಷ್ಟು ಪ್ರಮಾಣದ ನೀರು ದೊರೆಯುತ್ತಿದೆ.
ಜುಲೈ 28ರಿಂದ ನಾಲೆಗಳಿಗೆ ನೀರು ಬಿಡಲು 8–10 ದಿನಗಳ ಮೊದಲೇ ಕಾವೇರಿ ನೀರಾವರಿ ಸಮಿತಿಯಲ್ಲಿ ನಿರ್ಣಯ ಕೈಗೊಂಡು ರೈತರಿಗೂ ಮಾಹಿತಿ ನೀಡಲಾಗಿತ್ತು. ಹೀಗಾಗಿ ನೀರಿನ ಸೌಲಭ್ಯ ಇದ್ದವರು ಭತ್ತದ ಮಡಿ ಮಾಡಿಕೊಂಡಿದ್ದು ಇನ್ನೊಂದು ವಾರದಲ್ಲಿ ನಾಟಿ ಮಾಡಲಿದ್ದಾರೆ. ಉತ್ತಮ ಮಳೆಯೂ ಸುರಿಯುತ್ತಿರುವ ಕಾರಣ ನಾಗಮಂಗಲ, ಕೆ.ಆರ್.ಪೇಟೆ ತಾಲ್ಲೂಕಿನ ರೈತರು ರಾಗಿ ಬಿತ್ತನೆಯಲ್ಲಿ ತೊಡಗಿದ್ದಾರೆ.
ಕಳೆದ ವರ್ಷ ಈ ವೇಳೆಗಾಗಲೇ ಶೇ 9.7ರಷ್ಟು ಬಿತ್ತನೆಯಾಗಿತ್ತು. ಆದರೆ ಈಗ ಶೇ 18.9ರಷ್ಟು ಬಿತ್ತನೆಯಾಗಿದೆ. ಒಟ್ಟಾರೆ 1,96 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದ್ದು ಈವರೆಗೆ 37,072 ಹೆಕ್ಟೇರ್ನಲ್ಲಿ ನಾಟಿಕಾರ್ಯವಾಗಿದೆ. 56,850 ಹೆಕ್ಟೇರ್ ಭತ್ತ ಬಿತ್ತನೆ ಗುರಿಯಲ್ಲಿ 181 ಹೆಕ್ಟೇರ್ (ಶೇ 3) ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ.
61,365 ಹೆಕ್ಟೇರ್ ರಾಗಿ ಬಿತ್ತನೆಯಲ್ಲಿ ಶೇ 30ರಷ್ಟು ಪೂರ್ಣಗೊಂಡಿದೆ. 8,348 ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆ ಗುರಿಯಲ್ಲಿ ಶೇ 20ರಷ್ಟು ಪೂರ್ಣಗೊಂಡಿದೆ. 18,285 ಹೆಕ್ಟೇರ್ನ ತನಿ ಕಬ್ಬು ಬಿತ್ತನೆ ಗುರಿಯಲ್ಲಿ ಶೇ 15ರಷ್ಟು ಬಿತ್ತನೆ ಪೂರ್ಣಗೊಳಿಸಲಾಗಿದೆ.
‘ಆಗಸ್ಟ್ 2 ಅಥವಾ 3ನೇ ವಾರದಲ್ಲಿ ಭತ್ತ ಅಥವಾ ರಾಗಿ ಬೆಳೆಗಳ ಬಿತ್ತನೆ–ನಾಟಿ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಬಾರಿ ಸೂಕ್ತ ಸಮಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಹೇಳಿದರು.
ರಸಗೊಬ್ಬರ ಕೊರತೆ ಇಲ್ಲ: ಜಿಲ್ಲೆಯಲ್ಲಿ ರಸಗೊಬ್ಬರ, ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆ ಇಲ್ಲ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳು ಹಾಗೂ 80 ಪಿವಿಸಿಎಸ್ಗಳಲ್ಲಿ ಜು.25ರಿಂದಲೇ ಸಬ್ಸಿಡಿ ದರದಲ್ಲಿ ರೈತರಿಗೆ ಭತ್ತ, ರಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಈವರೆಗೆ 5,384 ಕ್ವಿಂಟಲ್ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ವ್ಯರ್ಥವಾಗುತ್ತಿದೆ ಜೀವ ಜಲ
ಕೊಡಗು ಜಿಲ್ಲೆಯಲ್ಲಿ ಭಾರಿ ಭಾರಿ ಮಳೆ ಸುರಿಯುತ್ತಿದ್ದು ಕೆಆರ್ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನದಿಗೆ 75 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ತುಂಬು ನದಿ ಹರಿಯುತ್ತಿದ್ದು ಆ ನೀರನ್ನು ಸದುಪಯೋಗ ಮಾಡಿಕೊಂಡು ಕೆರೆಗಳಿಗೆ ತಿರುಗಿಸಿಕೊಳ್ಳುವ ಯೋಜನೆಗಳು ಇಲ್ಲದ ಕಾರಣ ಜೀವ ಜಲ ವ್ಯರ್ಥವಾಗುತ್ತಿದೆ.
ಕೆಆರ್ಎಸ್ ನೀರು ನೇರವಾಗಿ ತಮಿಳುನಾಡು ತಲುಪುತ್ತಿದ್ದು ಅಲ್ಲಿಂದ ಸಮುದ್ರ ಸೇರುತ್ತಿದೆ. ಆದರೆ ನದಿ ಪಕ್ಕದಲ್ಲೇ ಇರುವ ಮಹದೇವಪುರ ಸೇರಿ ನದಿ ತಟದ ಹಲವು ಗ್ರಾಮಗಳಿಗೆ ಕುಡಿಯುವ ನೀರಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪೋಲಾಗುತ್ತಿರುವ ನೀರಿನ ಸದುಪಯೋಗ ಮರೀಚಿಕೆಯಾಗಿದೆ ಎಂದು ರೈತರು ಆರೋಪಿಸುತ್ತಾರೆ.
‘ಪ್ರತಿ ವರ್ಷ ಜುಲೈ, ಆಗಸ್ಟ್ ತಿಂಗಳಲ್ಲಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತದೆ. ನೀರನ್ನು ಸದುಪಯೋಗ ಮಾಡಿಕೊಂಡಿದ್ದರೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕೆರೆ ತುಂಬಿಸಿಕೊಳ್ಳಬಹುದಾಗಿತ್ತು. ಆ ಕೆಲಸವನ್ನುಇಲ್ಲಿವರೆಗೆ ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲಿ’ ಮಾಡಿಲ್ಲ ಎಂದು ರೈತ ಶಿವೇಗೌಡ ಆರೋಪಿಸುತ್ತಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.