ಮಂಡ್ಯ: ನಾಗತಿಹಳ್ಳಿ ಸಂಸ್ಕೃತಿ ಹಬ್ಬದ 17ನೇ ವಾರ್ಷಿಕೋತ್ಸವ ಏ.11ರಿಂದ ಮೂರು ದಿನಗಳ ಕಾಲ ನಾಗಮಂಗಲ ತಾಲ್ಲೂಕು ನಾಗತಿಹಳ್ಳಿ ಗ್ರಾಮ, ಸರ್ಕಾರಿ ಪ್ರಾಥಮಿಕ ಶಾಲಾ ಆವರಣದ ‘ಸಿಹಿಕನಸು’ ರಂಗಮಂದಿರದಲ್ಲಿ ನಡೆಯಲಿದೆ.
ಹಬ್ಬದ ಅಂಗವಾಗಿ ಏ.11ರಂದು ಬೆಳಿಗ್ಗೆ 9.30ಕ್ಕೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಯೋಜನೆ ಆಶ್ರಯದಲ್ಲಿ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸುವರು. ನಂತರ ಉಚಿತ ಮಧುಮೇಹ ಚಿಕಿತ್ಸಾ ಶಿಬಿರ ನಡೆಯಲಿದೆ. ಎಂಡೋಕ್ರಿನ್ ಮತ್ತು ಡಯಾಬಿಟಿಸ್ ಸಂಶೋಧನಾ ಟ್ರಸ್ಟ್ ಸಂಸ್ಥೆ ವೈದ್ಯರು ತಪಾಸಣೆ ನಡೆಸಲಿದ್ದಾರೆ. ನಾಗಮಂಗಲದ ಇಂಪು ಸಾಂಸ್ಕೃತಿಕ ವೇದಿಕೆಯ ಚಿಣ್ಯ ಮಂಜುನಾಥ್ ಅವರು ಶಾಲಾ ಮಕ್ಕಳಿಗೆ ಮೂರು ದಿನಗಳ ಕಾಲ ಭಾವಗೀತೆ, ಜನಪದ ಗೀತೆ ಕಲಿಕಾ ಶಿಬಿರ ನಡೆಸುವರು.
ಏ.12ರಂದು ಬೆಳಿಗ್ಗೆ 9.30ಕ್ಕೆ ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕ ಕೆ.ಯಾಲಕ್ಕಿಗೌಡ ಅವರೊಂದಿಗೆ ಗ್ರಾಮಸ್ಥರ ಸಂವಾದ ವಿದೆ. ರೈತರ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅವರು ಮಾರ್ಗ ದರ್ಶನ ಮಾಡುವರು. ಕಾಂತಾಪುರ ಗ್ರಾ.ಪಂ ಮಾಜಿ ಅಧ್ಯಕ್ಷೆ ನೀಲಾ ಶಿವಮೂರ್ತಿ ಅವರು ‘ಗ್ರಾಮೀಣ ಮಹಿಳೆಯ ಸಬಲೀಕರಣದ ಹಲವು ಸಾಧ್ಯತೆಗಳು’ ವಿಷಯ ಕುರಿತು ಮಾತನಾಡಲಿದ್ಧಾರೆ. ಸಾಹಿತಿ ದಿನೇಶ್ ಹೆರಗನಹಳ್ಳಿ ಅವರು ಕಾರ್ಯಕ್ರಮ ನಿರ್ವಹಿಸುವರು.
ಏ.13ರಂದು ಬೆಳಿಗ್ಗೆ 10 ಗಂಟೆಗೆ ಡಾ.ಎಚ್.ಎಲ್.ನಾಗೇಗೌಡ ಅವರ ‘ಜಾನಪದ ಲೋಕ’ದ ಕಲಾವಿದರು ಜಾನಪದ ನೃತ್ಯ ಪ್ರಸ್ತುತಪಡಿಸುವರು. ಸಂಜೆ ಸಂಜೆ 5 ಗಂಟೆಗೆ ಭಾವಗೀತೆ, ಜನಪದ ಗೀತೆ ಕಲಿಕಾ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಜೊತೆಗೆ ಪುಣ್ಯಕೋಟಿ ಎಚ್.ಟಿ.ಕೃಷ್ಣಪ್ಪ ಅವರ ಸ್ಮರಣೆ ಸಮಾರಂಭ ನಡೆಯಲಿದೆ. ಸಾಹಿತಿ ದಿನೇಶ್ ಹೆರಗನಹಳ್ಳಿ ಅವರ ‘ಭಾವಾಂಕುರ’, ಯಶಸ್ವಿ ನಾಗತಿಹಳ್ಳಿ ಅವರ ‘ಬೆಳಕಿನ ಕೂಸು’ ಕೃತಿಗಳನ್ನು ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಬಿಡುಗಡೆ ಮಾಡುವರು. ಕೃತಿಗಳನ್ನು ಕುರಿತು ಶಿವಕುಮಾರ್ ಕಾರೇಪುರ, ಶಿಲ್ಪಶ್ರೀ ಹರವು ಮಾತನಾಡುವರು.
ಸಂಜೆ 7 ಗಂಟೆಗೆ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದೆ. ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ, ಚಲನಚಿತ್ರ ನಿರ್ದೇಶಕ ವಸಿಷ್ಠ ಸಿಂಹ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಕಾರ್ಯದರ್ಶಿ ಡಾ.ಕೆ.ಮುರಳೀಧರ ಭಾಗವಹಿಸುವರು. ರಾತ್ರಿ 8 ಗಂಟೆಗೆ ಮೈಸೂರು ನಟನ ಸಂಸ್ಥೆಯ ‘ಪರಿಹಾರ’ ನಾಟಕ ಪ್ರದರ್ಶನಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.