ಮದ್ದೂರು: ತಾಲ್ಲೂಕಿನ ನಗರಕೆರೆ ಗ್ರಾಮಕ್ಕೆ ಸೇರಿರುವ ರಸ್ತೆಯ ಸ್ಥಳವನ್ನು ತೆರವು ಮಾಡಿ ರಸ್ತೆ ನಿರ್ಮಿಸಲು ಮದ್ದೂರು ತಾ.ಪಂ ಇಒ ನೇತೃತ್ವದಲ್ಲಿ ಮುಂದಾದಾಗ ರಸ್ತೆಗೆ ಸಂಬಂಧ ಪಟ್ಟ ಕುಟುಂಬ ವರ್ಗದ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಕಾರಣ ಕುಟುಂಬದ ಹಲವರನ್ನು ಬಂಧಿಸಲಾಯಿತು.
ಗ್ರಾಮದಲ್ಲಿರುವ ಗ್ರಾಮ ಠಾಣಾ ಸ್ಥಳದ ಒತ್ತುವರಿ ತೆರವಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎಂ.ಜುಲ್ಫಿಕರ್ ಖಾನ್ ಆದೇಶಿಸಿರುವ ಕಾರಣ ತೆರವು ಮಾಡಲು ತಾಪಂ ಇಒ ಮುನಿರಾಜು ಮುಂದಾದರು.
ಈ ಸಂದರ್ಭದಲ್ಲಿ ಅಧಿಕಾರಿಗಳ ಹಾಗೂ ಕುಟುಂಬದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸ್ಥಳ ತೆರವು ಮಾಡಲು ಬಂದಿ ದ್ದಾರೆ. ನಾವು ಸ್ಥಳ ತೆರವು ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟಿಸಿದರು.
ಅಧಿಕಾರಿಗಳು ಕುಟುಂಬದ ಸದಸ್ಯರನ್ನು ಮನವೊಲಿಸಲು ವಿಫಲರಾದಾಗ, ಪೊಲೀಸರು ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದುಕೊಂಡರು. ನಂತರ ರಸ್ತೆ ತೆರವು ಕಾರ್ಯ ನಡೆಯಿತು.
ಕುಟುಂಬದ ಸದಸ್ಯರ ಸಂಬಂಧಿ ಲಿಂಗಪ್ಪ ಮಾತನಾಡಿ, ‘ಈ ಸ್ಥಳವು 1965ರಿಂದಲೂ ನಮ್ಮ ವಶದಲ್ಲಿದ್ದು, ಎನ್.ಎಸ್.ಶಿವಲಿಂಗೇಗೌಡ, ಪುಟ್ಟ ಲಿಂಗೇಗೌಡ ಕುಟುಂಬದ ಪಶುಪತಿ, ಶಿವಶಂಕರ್, ವಸಂತಕುಮಾರ ಸೇರಿ ದಂತೆ ಹಲವರು ಅನುಭವದಲ್ಲಿದೆ. ಇದೀಗ ಅಧಿಕಾರಿಗಳು ಬಂದು ತೆರವು ಮಾಡಲು ಮುಂದಾಗಿರುವುದು ಸರಿಯಲ್ಲ. ತಾ.ಪಂ ಇಒ ಮುನಿರಾಜು ₹2 ಲಕ್ಷ ಹಣ ಪಡೆದು ಈ ರೀತಿ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.
ಮುನಿರಾಜು ಮಾತನಾಡಿ, ಸ್ಥಳ ತೆರವುಗೊಳಿಸುವಂತೆ ಗ್ರಾಮಸ್ಥರು ದೂರು ನೀಡಿದ ಕಾರಣ ತಾ.ಪಂ ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ಈ ಪ್ರಕರಣವನ್ನು ಜಿ.ಪಂ ಸಿಇಒ ನ್ಯಾಯಾಲಯಕ್ಕೆ ಕಳುಹಿಸಿದಾಗ ಜಿಪಂ ಸಿಇಒ ಅವರು ಸ್ಥಳ ತೆರವು ಮಾಡುವಂತೆ ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ರಸ್ತೆ ತೆರವು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ ಎಂದು ತಿಳಿಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸಿಪಿಐ ಪ್ರಸಾದ್ ನೇತೃತ್ವದ ಪೊಲೀಸ್ ಸಿಬ್ಬಂದಿ ಪಶುಪತಿ, ಅವರ ಮಕ್ಕಳು, ಶಿವಲಿಂಗು ಮೊದಲಾದವರನ್ನು ವಶಕ್ಕೆ ಪಡೆದರು.
ಮುಂಜಾಗ್ರತಾ ಕ್ರಮವಾಗಿ ಗ್ರಾಮ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ತಹಶೀಲ್ದಾರ್ ವಿಜಯ್ ಕುಮಾರ್, ಸಿಪಿಐ ಕೆ.ಆರ್.ಪ್ರಸಾದ್ ಸ್ಥಳದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.