ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸರ್ಕಾರಿ ಶಾಲೆ ಉಳಿವಿಗಾಗಿ ಗ್ರಾಮಸ್ಥರ ಹೋರಾಟ

₹ 1.80 ಕೋಟಿ ಪರಿಹಾರಕ್ಕಾಗಿ ಕಾನೂನು ಹೋರಾಟ, ಶಿಕ್ಷಣ ವಂಚಿತರಾದ ಮಕ್ಕಳು
Last Updated 4 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು–ಮೈಸೂರು ದಶಪಥ ಯೋಜನೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ನೆಲಸಮಗೊಂಡಿದ್ದು ₹ 1.80 ಕೋಟಿ ಪರಿಹಾರಕ್ಕಾಗಿ ಶಿಕ್ಷಣ ಇಲಾಖೆ ಹಾಗೂ ಭೂಮಿಯ ಪೂರ್ವಿಕರ ನಡುವೆ ಕಳೆದೊಂದು ವರ್ಷದಿಂದ ವ್ಯಾಜ್ಯ ಆರಂಭಗೊಂಡಿದೆ. ಇದರಿಂದ 120 ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಗ್ರಾಮಸ್ಥರು ಸರ್ಕಾರಿ ಶಾಲೆಯ ಉಳಿವಿಗಾಗಿ ಹೋರಾಟ ಆರಂಭಿಸಿದ್ದಾರೆ.

ತಾಲ್ಲೂಕಿನ ಶ್ರೀನಿವಾಸಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಜಾಗವನ್ನು ದಶಪಥ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡು ಕೆಡವಲಾಗಿದೆ. ಉಳಿಕೆ ಜಾಗದಲ್ಲಿ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ಇದೇ ಸಂದರ್ಭದಲ್ಲಿ ಶಾಲಾ ಜಾಗದ ಪೂರ್ವಿಕ ಕುಟುಂಬ ಸದಸ್ಯರು ಆ ಜಾಗ ತಮಗೆ ಸೇರಬೇಕು ಎಂದು ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಕಾನೂನು ಹೋರಾಟ ಆರಂಭವಾಗಿದ್ದು ಶಾಲಾ ನಿರ್ಮಾಣ ನಿರ್ಧಾರ ನನೆಗುದಿಗೆ ಬಿದ್ದಿದೆ.

ಕೋರ್ಟ್‌ನಲ್ಲಿ ದಾವೆ ಸಲ್ಲಿಕೆಯಾದ ಕಾರಣ 2019ರಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ₹ 1.80 ಕೋಟಿ ಪರಿಹಾರ ಹಣವನ್ನು ಕೋರ್ಟ್‌ಗೆ ಪಾವತಿಸಿದ್ದಾರೆ. ಕೇವಲ ₹ 76 ಲಕ್ಷ ಹಣವನ್ನು ಕಟ್ಟಡ ನಿಧಿ ಎಂದು ಶಿಕ್ಷಣ ಇಲಾಖೆ ಖಾತೆಗೆ ಜಮಾ ಮಾಡಿದ್ದಾರೆ. ಪರಿಹಾರ ಹಣಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದ್ದು ಶ್ರೀನಿವಾಸಪುರ ಶಾಲಾ ಮಕ್ಕಳ ಶೈಕ್ಷಣಿಕ ಭವಿಷ್ಯ ಇಕ್ಕಟ್ಟಿನಲ್ಲಿ ಸಿಲುಕಿದೆ.

ಶಾಲೆ ಸುಪರ್ದಿಯಲ್ಲಿ ಒಟ್ಟು 28 ಗುಂಟೆ ಜಾಗವಿತ್ತು, ಹೆದ್ದಾರಿಗಾಗಿ ಶಾಲೆ ನೆಲಸಮವಾದ ನಂತರವೂ ಶಾಲೆ ನಿರ್ಮಾಣಕ್ಕೆ ಬೇಕಾಗುವಷ್ಟು ಜಾಗ ಉಳಿದಿದೆ. ಆದರೆ ಪರಿಹಾರ ಹಣ ಸೇರಿದಂತೆ ಉಳಿಕೆ ಜಮೀನಿಗೂ ಜಾಗದ ಪೂರ್ವಿಕ ಕುಟುಂಬದವರು ದಾವೆ ಹೂಡಿದ್ದಾರೆ. ಪ್ರಕರಣದಲ್ಲಿ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಡಿಡಿಪಿಐ, ಬಿಇಒ, ಶಾಲಾ ಮುಖ್ಯಶಿಕ್ಷಕರು ಕಕ್ಷಿದಾರರಾಗಿದ್ದಾರೆ.

ಶಾಲೆ ಸ್ಥಳಾಂತರ: ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ರೀನಿವಾಸಪುರ ಶಾಲೆಯನ್ನು ಮರಕಾಡುದೊಡ್ಡಿ ಶಾಲೆಗೆ ಸ್ಥಳಾಂತರ ಮಾಡಿದ್ದಾರೆ. ನಾಲ್ವರು ಶಿಕ್ಷಕರು, 120 ಮಕ್ಕಳಿಗೆ 2 ಕೊಠಡಿ ಮಾತ್ರ ನೀಡಲಾಗಿದ್ದು ಮಕ್ಕಳು ಕುಳಿತುಕೊಳ್ಳಲೂ ಜಾಗ ಇಲ್ಲವಾಗಿದೆ. ಶಿಕ್ಷಕರಿಗೂ ಪ್ರತ್ಯೇಕ ಕೊಠಡಿ ಇಲ್ಲ. ಮಕ್ಕಳು ಇಕ್ಕಟ್ಟಿನಲ್ಲಿ ಪಾಠ ಕಲಿಯುವ ಪರಿಸ್ಥಿತಿ ಇದ್ದು ಹಲವು ಮಕ್ಕಳು ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಾರೆ.

‘ಸರ್ವೆ ನಂಬರ್‌ 131/1ರಲ್ಲಿ 28 ಗುಂಟೆ ಶಾಲಾ ಭೂಮಿ ಸೇರಿ ಒಟ್ಟು 6.11 ಎಕರೆ ಭೂಮಿಯನ್ನು 1956ರಲ್ಲೇ ಸರ್ಕಾರ ಖರೀದಿ ಮಾಡಿ ಶಾಲೆ ನಿರ್ಮಾಣ ಮಾಡಿದೆ. ಈ ಕುರಿತಂತೆ ಎಲ್ಲಾ ದಾಖಲಾತಿಗಳಿದ್ದು ಶಿಕ್ಷಣ ಇಲಾಖೆಗೆ ಒದಗಿಸಿದ್ದೇವೆ. ಹಲವು ದಶಕಗಳ ಕಾಲ ಶಾಲೆ ನಡೆದರೂ ಪೂರ್ವಿಕರು ತಕರಾರು ಎತ್ತಿರಲಿಲ್ಲ. ಆದರೆ ಈಗ ಕೋಟ್ಯಂತರ ರೂಪಾಯಿ ಪರಿಹಾರ ಬಂದ ನಂತರ ತಕರಾರು ಎತ್ತಿದ್ದಾರೆ. ಇದರಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕು ಇದ್ದು ಮಕ್ಕಳ ಶಿಕ್ಷಣ ಹಕ್ಕನ್ನು ಕಿತ್ತುಕೊಂಡಿದ್ದಾರೆ’ ಎಂದು ಗ್ರಾಮಸ್ಥರು ದೂರಿದರು.

‘ಸರ್ವೆ ನಂಬರ್‌ 131/2, 131/9ರ ಜಮೀನು ಕುರಿತಂತೆ ದೂರುದಾರರು ಹಾಗೂ ಇತರರ ನಡುವೆ ಪ್ರತ್ಯೇಕ ವ್ಯಾಜ್ಯಗಳಿವೆ. ಪರಿಹಾರ ಹಣಕ್ಕಾಗಿ ಶಾಲೆ ಇರುವ ಭೂಮಿಯ ಸರ್ವೆ ನಂಬರ್‌ 131/1ನ್ನೂ ದೂರಿನ ಜೊತೆ ಸೇರಿಸಿಕೊಂಡಿದ್ದಾರೆ. ಇದರಿಂದಾಗಿ ನೂತನ ಶಾಲೆ ನಿರ್ಮಾಣ ಮಾಡುವ ಕಾರ್ಯಕ್ಕೆ ತೊಡಕಾಗಿದೆ. ಈ ಕುರಿತು ಶಾಸಕರು, ಸಂಸದರಿಗೂ ದೂರು ನೀಡಲಾಗಿದೆ. ಕೋರ್ಟ್‌ ಸುಪರ್ದಿಯಲ್ಲಿರುವ ₹ 1.80 ಕೋಟಿ ಹಣ ಶಾಲಾ ನಿರ್ಮಾಣಕ್ಕೆ ದೊರೆಯಬೇಕು. ಅಲ್ಲಿಯವರೆಗೂ ಹೋರಾಟ ನಡೆಸುತ್ತೇವೆ’ ಎಂದು ಗ್ರಾಮಸ್ಥರಾದ ಎಸ್‌.ಪಿ.ಮಹೇಶ್‌, ಕೆ.ರಾಜು, ಕೃಷ್ಣ ತಿಳಿಸಿದರು.

***

ಶಾಲಾ ಜಾಗ ಉಳಿಸಿಕೊಳ್ಳಲು ಸರ್ಕಾರಿ ವಕೀಲರು ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದ್ದಾರೆ. ಆದಷ್ಟು ಬೇಗ ನೂತನ ಸರ್ಕಾರಿ ಶಾಲೆ ನಿರ್ಮಾಣ ಮಾಡಿ ಮಕ್ಕಳ ಶಿಕ್ಷಣ ಭವಿಷ್ಯ ಕಾಪಾಡಲಾಗುವುದು.
– ಎಸ್‌.ಟಿ.ಜವರೇಗೌಡ, ಡಿಡಿಪಿಐ

***

1956ರಲ್ಲಿ ಖರೀದಿಸಿರುವ 6.11 ಎಕರೆ ಭೂಮಿಗೂ, ಶಾಲಾ ಜಾಗಕ್ಕೂ ಸಂಬಂಧವಿಲ್ಲ. ಇಷ್ಟು ದಿನ ಶಾಲೆಗೆ ನಾವು ತೊಂದರೆ ಕೊಟ್ಟಿರಲಿಲ್ಲ. ಈಗ ನಮ್ಮ ಪೂರ್ವಿಕರ ಭೂಮಿಯ ಹಕ್ಕು ಕೇಳುವುದು ತಪ್ಪೇ?
–ಚಂದ್ರಶೇಖರ್‌, ದೂರುದಾರರು

***

ಜಗುಲಿ, ಬಯಲಿನಲ್ಲಿ ಪಾಠ: ಬೇಸರ
‘ತರಗತಿ, ಅಡುಗೆ ಕೋಣೆ, ಗೋದಾಮು, ಕಚೇರಿ, ಶಿಕ್ಷಕರ ಕೊಠಡಿ ಎಲ್ಲವೂ ಒಂದೇ ಆಗಿದೆ. ಮಕ್ಕಳಿಗೆ ಜಗುಲಿ, ಬಯಲಲ್ಲಿ ಮೇಲೆ ಕೂರಿಸಿ ಪಾಠ ಮಾಡಬೇಕಾದ ಪರಿಸ್ಥಿತಿ ಇದೆ. ಬಹುತೇಕ ಮಕ್ಕಳು ಕೊಳೆಗೇರಿಯಿಂದ ಬರುವ ಬಡಮಕ್ಕಳಿದ್ದಾರೆ. ಸುತ್ತಲೂ ಇರುವ ಐದಾರು ಕಾನ್ವೆಂಟ್‌ಗಳಿಗೆ ಸಡ್ಡು ಒಡೆಯುತ್ತಿರುವ ಮಕ್ಕಳು ತುಂಬಾ ಚೆನ್ನಾಗಿ ಓದುತ್ತಾರೆ. ಶಾಲಾ ಕೊಠಡಿ ಕೊರತೆಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ’ ಎಂದು ಮುಖ್ಯಶಿಕ್ಷಕಿ ಆಶಾರಾಣಿ ಬೇಸರ ವ್ಯಕ್ತಪಡಿಸಿದರು.

‘ಗೋದಾಮು ಶಿಥಿಲವಾಗಿದ್ದು ಅಕ್ಕಿ, ತರಕಾರಿ, ಧಾನ್ಯ. ಬೇಳೆ ಹಾಳಾಗುತ್ತಿವೆ. ಹೀಗಾಗಿ ತರಗತಿಯಲ್ಲೇ ವಸ್ತುಗಳನ್ನು ಇಟ್ಟುಕೊಂಡಿದ್ದೇವೆ. ನಮ್ಮ ಶಿಕ್ಷಕರು ಬುದ್ಧಿವಂತರು, ಸಂಕಷ್ಟದ ನಡುವೆಯೂ ಉತ್ತಮ ಪಾಠ ಬೋಧನೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಸುಸಜ್ಜಿತ ಶಾಲೆ ನಿರ್ಮಾಣವಾಗಬೇಕು’ ಎಂದರು.

‘ಶಾಲೆ ನೆಲಸಮವಾದ ನಂತರ ದೂರುದಾರರು ಅಲ್ಲಿಗೆ ತೆರಳಲಲು ನಮ್ಮನ್ನು ತಡೆಯುತ್ತಿದ್ದಾರೆ. ಅಲ್ಲಿರುವ ತೆಂಗಿನಮರದಲ್ಲಿ ಕಾಯಿ ಕೀಳಲೂ ಬಿಡುತ್ತಿಲ್ಲ. ಹಲವು ದಶಕಗಳಿಂದ ಸುಮ್ಮನಿದ್ದು ಈಗ ಪರಿಹಾರ ಹಣಕ್ಕಾಗಿ ದಾವೆ ಹೂಡಿದ್ದಾರೆ. ಭೂಮಿ ಶಾಲೆಗೇ ಸೇರಬೇಕು, ಅಲ್ಲಿಯೇ ಶಾಲೆ ನಿರ್ಮಾಣವಾಗಬೇಕು. ಎಲ್ಲಾ ದಾಖಲಾತಿಗಳು ಶಾಲೆಯ ಪರವಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT