ಮಂಡ್ಯ: ‘2023ಕ್ಕೆ ಕರ್ನಾಟಕ ಜನತಾದಳ ರಾಜ್ಯವಾಗಲಿದೆ. ಜನರು ಒಮ್ಮೆ ನನಗೆ ಐದು ವರ್ಷ ಅವಕಾಶ ಕೊಡಲಿ. ಮುಖ್ಯಮಂತ್ರಿ ಹೇಗೆ ಕೆಲಸ ಮಾಡಬೇಕು ಎಂದು ತೋರಿಸಿಕೊಡುತ್ತೇನೆ. ಹಾಗಾಗದಿದ್ದಲ್ಲಿ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಇಲ್ಲಿ ಹೇಳಿದರು.
‘ಬಿಜೆಪಿ ಮುಖಂಡರು ರಾಮರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎನ್ನುತ್ತಾರೆ, ಆದರೆ, ಲೂಟಿ ಮಾಡಲು ಮಾತ್ರ ಹಣ ಇದೆ. ಚುನಾವಣೆ ಘೋಷಣೆಯಾಗಲಿ, ಎಲ್ಲವನ್ನೂ ಜನರ ಮುಂದಿಡುತ್ತೇನೆ’ ಎಂದರು.
‘₹ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ ನಾನು ಕಮಿಷನ್ ಪಡೆದಿದ್ದೆನಾ? ರೈತರ ಸಾಲ ಮನ್ನಾ ಮಾಡಿದರೆ ಕಮಿಷನ್ ಸಿಗುವುದಿಲ್ಲ. ಹೀಗಾಗಿ, ಬಿಜೆಪಿ ಎಲ್ಲೂ ಸಾಲ ಮನ್ನಾ ಮಾಡಿಲ್ಲ’ಎಂದರು.
ರಾಧಿಕಾ ಯಾರು?: ರಾಧಿಕಾ ಕುಮಾರಸ್ವಾಮಿ ಅವರನ್ನುಸಿಸಿಬಿ ವಿಚಾರಣೆಗೆ ಒಳಪಡಿಸಿರುವ ಕುರಿತ ಪ್ರಶ್ನೆಗೆ ‘ರಾಧಿಕಾ ಯಾರೋ ಗೊತ್ತಿಲ್ಲ. ನನಗೆ ಸಂಬಂಧಪಡದ ವಿಚಾರವನ್ನು ಕೇಳಬೇಡಿ’ ಎಂದರು.