ಆಗಿದ್ದೇನು: ಹೊಸಹೊಳಲು ಗ್ರಾಮದ ಹರೀಶ್ ಎಂಬುವವರು ಅಧಿಕಾರಿ ಮೇಲೆ ಆರೋಪ ಹೊರೆಸಿ ‘ನಾನು ಮತ್ತು ನನ್ನ ಸ್ನೇಹಿತ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ತಲಾ ₹5ಲಕ್ಷ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದೆನು. ಸಾಲ ಮಂಜೂರಾತಿಗೆ ನನ್ನ ತಾಯಿಯ ಒಡವೆಗಳನ್ನು ಗಿರವಿಯಿಟ್ಟು ₹1 ಲಕ್ಷ ಲಂಚದ ಹಣವನ್ನು ನಿಗಮದ ವಿಸ್ತರಣಾಧಿಕಾರಿ ಕೃಷ್ಣಪ್ಪನಿಗೆ ನೀಡಿದ್ದೇನೆ. ನಾನು ಕರೆ ಮಾಡಿ ವಿಚಾರಿಸಿದ ವೇಳೆ, ಕೆಲಸ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಕಳೆದೊಂದು ವಾರದಿಂದ ನನಗೂ ನಿನ್ನ ಸಾಲದ ಅರ್ಜಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಇದರಿಂದ ಬೇಸತ್ತು ಪ್ರಮಾಣ ಮಾಡಲು ಕರೆದಿದ್ದೇನೆ. ದೇವರ ಮುಂದೆ ನಾನು ಹೇಳಿರುವುದೆಲ್ಲವೂ ಸತ್ಯ’ ಎಂದು ಲಕ್ಷ್ಮೀನಾರಾಯಣ ದೇವಾಲಯದ ನವಗ್ರಹ ಗುಡಿಯ ಮುಂದೆ ಹಾರ ಹಾಕಿಕೊಂಡು ಪ್ರಮಾಣ ಮಾಡಿದರು.