ಮದ್ದೂರು/ಕೊಪ್ಪ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗೆಲುವು ನಿಶ್ಚಿತ ಎಂದು ನಟ ಯಶ್ ಬುಧವಾರ ಇಲ್ಲಿ ಹೇಳಿದರು.
‘ಸುಮಲತಾ ಅವರಿಗೆ ಜಿಲ್ಲೆಯ ಜನ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಎಷ್ಟು ಮತಗಳು ಬರಲಿವೆ ಎಂಬ ಬಗ್ಗೆ ಈಗಲೇ ಹೇಳುವುದು ಸರಿಯಲ್ಲ. ಆದರೆ, ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ. ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲಿದ್ದಾರೆ’ ಎಂದರು.
‘ನಟ ದರ್ಶನ್ ಅವರು ಪ್ರೀತಿಯಿಂದ ‘ಜೋಡೆತ್ತು’ ಎಂದು ಹೇಳಿದ್ದರು. ಈಗ ಅದೇ ಹೆಸರಿನ ಸಿನಿಮಾ ತಯಾರಾಗುತ್ತಿದೆ. ಆದರೆ, ಆ ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ವಿರೋಧಿಗಳ ಆರೋಪಗಳಿಗೆ ಉತ್ತರಿಸುವ ಅಗತ್ಯವಿಲ್ಲ. ನಾನು ಮತ್ತು ದರ್ಶನ್ ಮುಂದಿನ ದಿನಗಳಲ್ಲೂ ಜಿಲ್ಲೆಯ ಜನರೊಟ್ಟಿಗೆ ಇರುತ್ತೇವೆ’ ಎಂದರು.