ಮೈಸೂರು:‘ಪೆಗಾಸಸ್ ಗೂಢಚಾರಿಕೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಮುರಿದು ಮಾತಾಡಬೇಕು’ ಎಂದು ಕೆಪಿಸಿಸಿ ವಕ್ತಾರ ಪ್ರೊ.ಬಿ.ಕೆ.ಚಂದ್ರಶೇಖರ್ ಒತ್ತಾಯಿಸಿದರು.
‘ಭಯೋತ್ಪಾದಕರ ಮೇಲೆ ಗೂಢಚಾರಿಕೆ ನಡೆಯಬೇಕೇ ಹೊರತು ರಾಜಕಾರಣಿಗಳು ಹಾಗೂ ಪತ್ರಕರ್ತರ ಮೇಲಲ್ಲ. ಆ ಬಗ್ಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಫ್ರಾನ್ಸ್ ಅಧ್ಯಕ್ಷರು ಈ ಬಗ್ಗೆ ಈಗಾಗಲೇ ತನಿಖೆ ನಡೆಸಿದ್ದಾರೆ. ವರದಿ ಕೊಡುವಂತೆ ಇಸ್ರೇಲ್ ಪ್ರಧಾನಿಗೂ ಹೇಳಿದ್ದಾರೆ. ಆದರೆ, ನರೇಂದ್ರ ಮೋದಿ ಮಾತ್ರ ಸುಮ್ಮನಿದ್ದಾರೆ’ ಎಂದು ಅವರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
‘ನರೇಂದ್ರ ಮೋದಿ 7 ವರ್ಷದಲ್ಲಿ ಪತ್ರಿಕಾಗೋಷ್ಠಿಯನ್ನೇ ನಡೆಸದೇ ತಮ್ಮ ವೈಫಲ್ಯಗಳನ್ನು ಮುಚ್ಚಿಡುತ್ತಿದ್ದಾರೆ. ಒಂದು ವೇಳೆ ಅವರಿಗೆ ಪತ್ರಿಕಾಗೋಷ್ಠಿ ನಡೆಸಲು ಭಯವಿದ್ದರೆ, ಪತ್ರಿಕಾಗೋಷ್ಠಿ ನಡೆಸಲೆಂದೇ ಉಪಪ್ರಧಾನಿಯೊಬ್ಬರನ್ನು ನೇಮಿಸಿಕೊಳ್ಳಲಿ’ ಎಂದು ಸಲಹೆ ನೀಡಿದರು.
‘ಕೋವಿಡ್ ಲಸಿಕೆಗಾಗಿ ಜನ ಪರದಾಡುತ್ತಿದ್ದಾರೆ. ಶೇ 5.50ರಷ್ಟು ಮಂದಿಗೆ ಮಾತ್ರ ಲಸಿಕೆ ದೊರೆತಿದೆ. ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ಸಿಗುವುದು ಕಷ್ಟಸಾಧ್ಯ. ಹೀಗಿದ್ದರೂ, ನರೇಂದ್ರ ಮೋದಿ ಲಸಿಕೆಯ ಪ್ರಮಾಣಪತ್ರದಲ್ಲೂ ತಮ್ಮ ಚಿತ್ರ ಹಾಕಿಕೊಂಡಿರುವುದು ನಾಚಿಕೆಗೇಡು’ ಎಂದು ಚಾಟಿ ಬೀಸಿದರು.
‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ತಕ್ಷಣ ಎಲ್ಲವೂ ಸರಿ ಹೋಗುವುದಿಲ್ಲ. ಹಣಕಾಸು ಇಲಾಖೆಗೆ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಬೇಕು. ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಿಕೊಡಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.