ಆರೋಗ್ಯ ಕ್ಷೇತ್ರವು ಸೇವೆಯಾಗಿರಬೇಕು ಹೊರತು ಉದ್ಯಮವಾಗಬಾರದು: ಪ್ರೊ.ಎಂ.ಕೃಷ್ಣೇಗೌಡ

ಮೈಸೂರು: ‘ಆರೋಗ್ಯ ಕ್ಷೇತ್ರವು ಸೇವೆಯಾಗಿರಬೇಕೇ ವಿನಹಾ ಅದು ಉದ್ಯಮವಾಗಬಾರದು’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ತಿಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಯು ಇಲ್ಲಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಆರೋಗ್ಯ ಕ್ಷೇತ್ರವನ್ನು ಲಾಭ ಪಡೆಯುವಂತಹ ಉದ್ಯಮ ಎಂದು ಪರಿಗಣಿಸುವುದು ಅತ್ಯಂತ ಭಯಂಕರವಾದದ್ದು ಎಂದು ಆತಂಕ ವ್ಯಕ್ತಪಡಿಸಿದರು.
‘ವೇದಿಕೆಯ ಮೇಲೆ ಆಡುವ ಮಾತುಗಳಿಗೂ ಖಾಸಗಿಯಾಗಿ ಆಡುವ ಮಾತುಗಳಿಗೂ ಅಂತರ ಕಡಿಮೆಯಾಗಬೇಕು. ಶ್ರದ್ದೆ, ಬದ್ದತೆ ಪ್ರಾಮಾಣಿಕತೆಯಿಂದ ನಾವು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಾಗ ಮಾತ್ರ ಆ ವೃತ್ತಿಗೆ ಬಹಳ ದೊಡ್ಡ ಗೌರವ ಸಿಗುತ್ತದೆ’ ಎಂದರು.
ಮುಖಂಡ ಸಿ.ಎಚ್.ವಿಜಯಶಂಕರ್ ಮಾತನಾಡಿ, ‘ಬದುಕು ಎಂದಿಗೂ ಕೊನೆಯಾಗುವುದಿಲ್ಲ. ಸತ್ತ ಮೇಲೂ ಬದುಕಿದೆ. ಸ್ವಾಮಿವಿವೇಕಾನಂದ ಅವರೂ ಈ ಬದುಕು ಒಂದು ನಿಲ್ದಾಣವೇ ಹೊರತು ಕೊನೆಯ ನಿಲ್ದಾಣ ಅಲ್ಲ ಎನ್ನುತ್ತಾರೆ. ಸಾವು ಶಾಶ್ವತ ಅಲ್ಲ ಸಾಧನೆ ಶಾಶ್ವತ’ ಎಂದು
ಹೇಳಿದರು.
ನೇತ್ರತಜ್ಞ ಡಾ.ಮಣಿಕರ್ಣಿಕಾ, ‘ಮೃತ್ಯುಂಜಯಪ್ಪ ಕೇವಲ ವೈದ್ಯರಾಗಿರಲಿಲ್ಲ. ಸರಗೂರಿನಲ್ಲಿ ಮರಗಳನ್ನು ನೆಟ್ಟು ಪೋಷಿಸಿದರು. ಅವರ ಮನೆಯಲ್ಲೂ ಸಾಕಷ್ಟು ಗಿಡಗಳನ್ನು ಬೆಳೆಸಿದ್ದಾರೆ. ದೂರದೂರಿನಿಂದ ಬಂದ ರೋಗಿಗಳಿಗೆ ಊಟವನ್ನು ಸಹ ಹಾಕಿಸುತ್ತಿದ್ದರು’ ಎಂದು ಶ್ಲಾಘಿಸಿದರು.
ನೇತ್ರ ತಜ್ಞರಾದ ಡಾ.ಎಚ್.ಆರ್.ಮಣಿಕರ್ಣಿಕಾ ಹಾಗೂ ಡಾ.ಬಿ.ಎನ್.ಶೇಷಾದ್ರಿ ದಂಪತಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಾಂಡವಪುರದಲ್ಲಿ ಗ್ರಾಮ ವಿಕಾಸ ಕಾರ್ಯಕ್ರಮ ಮಾಡುತ್ತಿರುವ ಜನಜಾಗರಣ ಟ್ರಸ್ಟ್ನವರ ಕಟ್ಟಡ ನಿರ್ಮಾಣಕ್ಕೆ ಪ್ರಶಸ್ತಿ ಮೊತ್ತ ₹ 25 ಸಾವಿರನ್ನು ನೀಡುವುದಾಗಿ ಮಣಿಕರ್ಣಿಕಾ ಪ್ರಕಟಿಸಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.