ಮೈಸೂರು: ‘ವಿಶೇಷ ವ್ಯಕ್ತಿಗಳಲ್ಲಿರುವ ಪ್ರತಿಭೆ ಗುರುತಿಸಿ, ಅವರಿಗೆ ಆತ್ಮವಿಶ್ವಾಸ ತುಂಬಬೇಕು’ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯು ನಗರದ ಕರ್ಜನ್ ಉದ್ಯಾನದ ಡಾ.ಮರಿಗೌಡ ಸಭಾಂಗಣದಲ್ಲಿ ಅಂಗವಿಕಲರಿಗೆ ಗುರುವಾರ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ 2ನೇ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲೆಂದು ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ಅಗತ್ಯ ಸಹಕಾರ ಕೊಡುತ್ತಿರುವುದು ಶ್ಲಾಘನೀಯವಾದುದು. ಸಬಲೀಕರಣಕ್ಕಾಗಿ ಉದ್ಯೋಗ ಮೇಳವನ್ನೂ ನಡೆಸುತ್ತಿರುವುದು ಅಭಿನಂದನಾರ್ಹ’ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಾಲಿನಿ ಮಾತನಾಡಿ, ‘ಅಂಗವಿಕಲರು ಸಾಮಾನ್ಯರಿಗಿಂತಲೂ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಆತಂಕವಿಲ್ಲದೆ ಉತ್ಪಾದನಾ ಕ್ಷೇತ್ರದ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ’ ಎಂದು ಹೇಳಿದರು.
ಸಮರ್ಥನಂ ಸಂಸ್ಥೆಯ ಕೌಶಲ ಅಧಿಕಾರಿ ಚಂದ್ರಶೇಖರ್, ಟ್ರಸ್ಟಿ ವಸಂತಿ ಮಾತನಾಡಿದರು.
ಮೇಳದಲ್ಲಿ 22 ಕಂಪನಿಗಳು, 263 ಅಭ್ಯರ್ಥಿಗಳು ಭಾಗವಹಿಸಿದ್ದರು. 147 ಮಂದಿ ಉದ್ಯೋಗ ಮತ್ತು ಮುಂದಿನ ಹಂತಕ್ಕೆ ಆಯ್ಕೆಯಾದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಆಶ್ವಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಮೈಸೂರು ವಿಭಾಗದ ಸಂಯೋಜಕ ಶಿವರಾಜು, ಸತೀಶ್ ನಾಯರ್, ಸುಭಾಷ್ ಚಂದ್ರ, ವೀರಭದ್ರ ಪಾಟೇಲ, ಜೆಸ್ಟೀನ್ ಇದ್ದರು.