ಮೈಸೂರು: ನಗರದ ವಿವಿಧೆಡೆ ಒತ್ತುವರಿಯಾಗಿದ್ದ ಸುಮಾರು ₹ 15.4 ಕೋಟಿ ಮೌಲ್ಯದ ಜಮೀನನ್ನು ಮಂಗಳವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ತನ್ನ ವಶಕ್ಕೆ ಪಡೆದುಕೊಂಡಿದೆ.
ಟಿ.ಕೆ.ಬಡಾವಣೆಯಲ್ಲಿ (ನಿವೇಶನ ಸಂಖ್ಯೆ 777) ₹ 1.70 ಕೋಟಿ ಮೌಲ್ಯದ 40x60 ಅಡಿ ವಿಸ್ತೀರ್ಣದ ಮೂಲೆ ನಿವೇಶನವನ್ನು ವಶಕ್ಕೆ ಪಡೆಯಲಾಗಿದೆ. ದಟ್ಟಗಳ್ಳಿ ಸರ್ವೆ ಸಂಖ್ಯೆ 114 ಮತ್ತು 115ರಲ್ಲಿ ಪ್ರಾಧಿಕಾರಕ್ಕೆ ಸೇರಿದ ಸುಮಾರು ₹ 12 ಕೋಟಿ ಮೌಲ್ಯದ 50x80 ಅಡಿ ವಿಸ್ತೀರ್ಣದ ಮೂರು ನಿವೇಶನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಲ್ಲದೇ, ಟಿ.ಕೆ.ಬಡಾವಣೆಯ ಮತ್ತೊಂದು ಕಡೆ (ನಿವೇಶನ ಸಂಖ್ಯೆ 719/ಎ) ಒತ್ತುವರಿ ಆಗಿದ್ದ ₹ 1.70 ಕೋಟಿ ಮೌಲ್ಯದ 40x60 ಅಡಿ ವಿಸ್ತೀರ್ಣದ ನಿವೇಶನವನ್ನು ಪ್ರಾಧಿಕಾರವು ತನ್ನ ಸುಪರ್ದಿಗೆ ಪಡೆದುಕೊಂಡಿದೆ.
‘ಪ್ರಾಧಿಕಾರಕ್ಕೆ ಸೇರಿದ ಜಮೀನನ್ನು ಒತ್ತುವರಿ ಮಾಡಿಕೊಂಡು, ತಂತಿ ಬೇಲಿ ಹಾಕಿ ಶೆಡ್ ಆಗಿ ಮಾಡಿಕೊಂಡಿದ್ದರು. ಅವುಗಳನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಕಳೆದ ಆರು ತಿಂಗಳಲ್ಲಿ ಸುಮಾರು ₹ 150 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಒತ್ತುವರಿದಾರರ ಮೇಲೆ ಕ್ರಮ ಜರುಗಿಸಲಾಗುವುದು. ವಶಕ್ಕೆ ಪಡೆದ ನಿವೇಶನಗಳನ್ನು ಹರಾಜಿಗೆ ಹಾಕಲಾಗುವುದು’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ತೆರವು ಕಾರ್ಯಾಚರಣೆಯಲ್ಲಿ ಡಿ.ಬಿ.ನಟೇಶ್, ಅಧೀಕ್ಷಕ ಎಂಜಿನಿಯರ್ ಶಂಕರ್, ವಲಯ ಅಧಿಕಾರಿ ಕಿರಣ್, ಸಹಾಯಕ ಎಂಜಿನಿಯರ್ ರವಿಕುಮಾರ್ ಇದ್ದರು.