ಮೈಸೂರು: ಈರುಳ್ಳಿ ದಾಸ್ತಾನಿನ ಮೇಲೆ ಜಿಲ್ಲಾಡಳಿತ ಮಿತಿ ಹೇರಿ ಮಂಗಳವಾರ ಆದೇಶ ಹೊರಡಿಸಿದೆ.
ಸಗಟು ಮಾರಾಟಗಾರರು, ಡೀಲರ್ಗಳು, ಉತ್ಪಾದಕರು ಹಾಗೂ ಕಮಿಷನ್ ಏಜೆಂಟ್ಗಳು 250 ಕ್ವಿಂಟಲ್ ಹಾಗೂ ಚಿಲ್ಲರೆ ಮಾರಾಟಗಾರರು50 ಕ್ವಿಂಟಲ್ನಷ್ಟು ಈರುಳ್ಳಿಯನ್ನು ಮಾತ್ರ ದಾಸ್ತಾನು ಇಟ್ಟುಕೊಳ್ಳಬಹುದು.
ಒಂದು ವೇಳೆ ಗರಿಷ್ಠ ದಾಸ್ತಾನಿನ ಈ ಮಿತಿಯನ್ನು ಮೀರಿ ಸಂಗ್ರಹಿಸಿದವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆ–1955ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈರುಳ್ಳಿಯ ಸಗಟು ಮಾರಾಟಗಾರರು, ಡೀಲರ್ಗಳು, ಕಮಿಷನ್ ಏಜೆಂಟ್ಗಳು ಮತ್ತು ಈರುಳ್ಳಿಯ ಚಿಲ್ಲರೆ ಮಾರಾಟಗಾರರು ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿ ಆದೇಶ 1986ರಂತೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಪರವಾನಗಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಆದೇಶದಲ್ಲಿ ತಿಳಿಸಿದ್ದಾರೆ.
ಎಲ್ಲ ದಾಸ್ತಾನು ಕೇಂದ್ರಗಳ ಮೇಲೆ ಅನಿರೀಕ್ಷಿತ ದಾಳಿ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಪೂರೈಕೆ ಪ್ರಮಾಣ ಹೆಚ್ಚಾದರೂ ಬೆಲೆ ಇಳಿಯದೇ ಏರಿಕೆಯಾಗುತ್ತಿದ್ದು, ಕಾಳಸಂತೆಯಲ್ಲಿ ಅಕ್ರಮ ದಾಸ್ತಾನು ನಡೆಯುತ್ತಿರಬಹುದು ಎಂದು ಸೋಮವಾರವಷ್ಟೇ ‘ಪ್ರಜಾವಾಣಿ’ ‘ಈರುಳ್ಳಿ ದರಕ್ಕೆ ಬೀಳದ ಕಡಿವಾಣ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.