ಮೈಸೂರು: ಕೋಲಾರ ಜಿಲ್ಲೆಯ ಕೆಜಿಎಫ್ ನಗರಸಭೆಯಲ್ಲಿ ತಮಿಳಿನ ನಾಮಫಲಕ ಹಾಕಿರುವುದನ್ನು ವಿರೋಧಿಸಿ ಜುಲೈ 26ರಂದು ಕೆಜಿಎಫ್ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ತಿಳಿಸಿದರು.
ನಗರಸಭೆಗೆ ಆಯ್ಕೆಯಾದವರ ಪೈಕಿ ಮೂವರನ್ನು ಬಿಟ್ಟರೆ ಉಳಿದವರೆಲ್ಲರೂ ತಮಿಳರೇ ಆಗಿದ್ದಾರೆ. ಹೀಗಾಗಿ, ನಗರಸಭೆಯನ್ನು ಸೂಪರ್ಸೀಡ್ ಮಾಡಬೇಕು ಎಂದು ಅವರು ಇಲ್ಲಿ ಬುಧವಾರ ಒತ್ತಾಯಿಸಿದರು.
ಬ್ಯಾಂಕುಗಳಲ್ಲಿರುವ ಠೇವಣಿ ಕನ್ನಡಿಗರದ್ದು. ಆದರೆ, ಕೆಲಸ ಮಾಡುವವರು ಪರಭಾಷಿಕರು. ಕಾರ್ಖಾನೆಗಳು ಇಲ್ಲಿನ ಸರ್ಕಾರದಿಂದ ರಿಯಾಯಿತಿ ಪಡೆದು ಹೊರ ರಾಜ್ಯದವರಿಗೆ ಉದ್ಯೋಗ ನೀಡುತ್ತಿವೆ. ಈ ರೀತಿಯಾದರೆ ಮುಂದೆ ಕನ್ನಡಿಗರಿಗೆ ಉಳಿಗಾಲ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡಿಗರಿಗೆ ಉದ್ಯೋಗ, ಚೆಕ್ಗಳು ಸೇರಿದಂತೆ ಎಲ್ಲ ವ್ಯವಹಾರಗಳೂ ಕನ್ನಡದಲ್ಲಿ ನಡೆಸಬೇಕು ಎಂದು ಆಗ್ರಹಿಸಿ ಬ್ಯಾಂಕುಗಳಿಗೆ ನುಗ್ಗುವ ಚಳವಳಿಯನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದರು.
ಇದಕ್ಕೂ ಮುನ್ನ ಅವರು ಇಲ್ಲಿನ ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)ದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.