ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ: ನರೇಂದ್ರ ಮೋದಿ

ಉದ್ಯೋಗ ಸ್ವರೂಪಕ್ಕೆ ಯುವಕರು ಹೊಂದಿಕೊಳ್ಳಬೇಕು: ಮೋದಿ
Last Updated 19 ಅಕ್ಟೋಬರ್ 2020, 12:02 IST
ಅಕ್ಷರ ಗಾತ್ರ

ಮೈಸೂರು: ‘ಈ ದಶಕವೂ ಭಾರತಕ್ಕೆ ಸೇರಿದ್ದು. ರಾಷ್ಟ್ರದ ಅಭಿವೃದ್ಧಿಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅಗತ್ಯ ಬದಲಾವಣೆ ತರಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿದ್ದ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ವರ್ಚುಯಲ್‌ ವೇದಿಕೆಯಲ್ಲಿ ನವದೆಹಲಿಯಿಂದ ಮಾತನಾಡಿದರು.

‘ಕಳೆದ ಆರೇಳು ತಿಂಗಳಲ್ಲಿ ಸುಧಾರಣೆ ಪರ್ವ ಹಾಗೂ ಆಡಳಿತದ ವೇಗವನ್ನು ತಾವು ಗಮನಿಸಿರಬಹುದು. ಇದು ಕೃಷಿ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ, ವಿಮಾನಯಾನ, ಕಾರ್ಮಿಕ ವಲಯದಲ್ಲಿ ಇರಬಹುದು. ಈ ಎಲ್ಲಾ ಬೆಳವಣಿಗೆಯು ಭಾರತದ ಕೋಟ್ಯಂತರ ಯುವಕರಏಳಿಗೆ ಹಾಗೂ ಈ ದಶಕವು ಭಾರತದ್ದಾಗಿರಬೇಕು ಎಂಬ ಸದುದ್ದೇಶ ಒಳಗೊಂಡಿದೆ. ಯುವಕರಿಗಂತೂ ಈ ದಶಮಾನ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿದೆ. ತಳಪಾಯ ಗಟ್ಟಿ ಇದ್ದಾಗ ಮಾತ್ರ ಇದೆಲ್ಲಾ ಸಾಧ್ಯ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ–2020 ಪ್ರಸ್ತಾಪಿಸುತ್ತಾ, ‘ದೇಶವನ್ನು ಉನ್ನತ ಶಿಕ್ಷಣದ ಪ್ರಮುಖ ತಾಣವನ್ನಾಗಿಸಲು ಹಾಗೂ ಯುವಕರನ್ನು ಸ್ಮರ್ಧಾತ್ಮಕರನ್ನಾಗಿ ಮಾಡಲು ಎಲ್ಲಾ ಪ್ರಯತ್ನಗಳು ಸಾಗಿವೆ. ಅದಕ್ಕಾಗಿ ಕೌಶಲ, ಪುನರ್‌ಕೌಶಲ, ಸುಧಾರಿತ ಕೌಶಲದ ಅಗತ್ಯವಿದೆ. ಬದಲಾಗುತ್ತಿರುವ ಉದ್ಯೋಗ ಸ್ವರೂಪಕ್ಕೆ ಯುವಕರು ಹೊಂದಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಗೆಮಹತ್ವದ ಹೆಜ್ಜೆಇಡಲಾಗಿದೆ. ನರ್ಸರಿಯಿಂದ ಹಿಡಿದು ಪಿಎಚ್‌.ಡಿವರೆಗೆ ಮೂಲಭೂತ ಬದಲಾವಣೆ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯು ಮಹತ್ವದ ಮೆಟ್ಟಿಲಾಗಿದೆ. ಕೇವಲ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದಲ್ಲ; ಆಡಳಿತ ಸುಧಾರಣೆ, ಲಿಂಗ ಸಮಾನತೆ, ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು.

ನೂತನ ಶಿಕ್ಷಣ ನೀತಿ ಅನ್ವಯ ಮೈಸೂರು ವಿಶ್ವವಿದ್ಯಾಲಯ ಆರಂಭಿಸುತ್ತಿರುವ ಬಹುಶಿಸ್ತೀಯ ಅಧ್ಯಯನ ವಿಚಾರ ಕುರಿತು ಶ್ಲಾಘಿಸಿದ ಪ್ರಧಾನಿ, ‘ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಜಾಗತಿಕ ತಂತ್ರಜ್ಞಾನವನ್ನು ಸ್ಥಳೀಯ ಸಂಸ್ಕೃತಿಗೆ ಅನ್ವಯಿಸಿಕೊಂಡು ಕಲಿಯಲು ಅವಕಾಶಗಳಿವೆ. ಸ್ಥಳೀಯ ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸಿ, ಸಾಮಾಜಿಕ ವಿಚಾರಗಳ ಬಗೆಗಿನ ಸಂಶೋಧನೆಯ ಸಂಪ್ರದಾಯ ಉತ್ತೇಜಿಸಬೇಕು’ ಎಂದರು.

ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ.ವಿಶ್ವೇಶ್ವರಯ್ಯ, ಕುವೆಂಪು ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರನ್ನು ಸ್ಮರಿಸಿದರು. ಪದವಿ ಪ್ರಮಾಣ ಪತ್ರ ಪಡೆದವರಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದರು.‌

ಗೌರವ ಡಾಕ್ಟರೇಟ್‌ ಗೌರವಕ್ಕೆ ಪಾತ್ರರಾಗಿರುವ ಇನ್ಫೊಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಗೈರಾಗಿದ್ದರು. ಅತಿಹೆಚ್ಚಿನ ಪದಕ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡ 30 ಮಂದಿಗೆ ಈ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.

ರಾಜ್ಯಪಾಲ ವಜುಭಾಯಿ ವಾಲಾ (ವರ್ಚುವಲ್‌ ವೇದಿಕೆ), ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಕುಲಪತಿ ಪ್ರೊ.ಹೇಮಂತ್‌ ಕುಮಾರ್‌, ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT