ಮೈಸೂರು: ಇಲ್ಲಿನ ಅಗ್ರಹಾರ ವಾರ್ಡ್ 51ರಲ್ಲಿ ಕಳೆದ 10 ದಿನಗಳಿಂದಲೂ ಹೊಟ್ಟೆನೋವು, ವಾಂತಿ, ಭೇದಿ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿನ ಔಷಧ ಅಂಗಡಿಗಳಲ್ಲಿಯೂ ಈ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತಹ ಔಷಧಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತಿವೆ.
ಈಗಾಗಲೇ ಈ ವಾರ್ಡಿನಿಂದ ಕುಡಿಯುವ ನೀರಿನ 24 ಮಾದರಿಗಳನ್ನು ಇಲ್ಲಿನ ವಾಣಿವಿಲಾಸ ನೀರು ಸರಬ ರಾಜು ಕಾರ್ಯಾಗಾರದಲ್ಲಿರುವ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ನೀರನ್ನು ಕ್ಲೋರಿನ್ ಮೂಲಕ ಸ್ವಚ್ಛಗೊಳಿಸಿದರೂ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಿಲ್ಲ.
‘ಕೆಲವೊಬ್ಬರಿಗೆ ದಿನವೊಂದಕ್ಕೆ 45–50 ಬಾರಿ ಭೇದಿಯಾಗಿರುವ ಉದಾಹರಣೆಗಳೂ ಇವೆ. ಹಲವು ಮಂದಿ ತೀವ್ರವಾಗಿ ಸುಸ್ತಾಗಿ ಆಸ್ಪತ್ರೆಗೂ ದಾಖಲಾಗಿದ್ದಾರೆ. 24 ಕುಟುಂಬಗಳು ಈ ಸಮಸ್ಯೆ ಕುರಿತು ದೂರು ನೀಡಿವೆ’ ಎಂದು ಇಲ್ಲಿನ ಪಾಲಿಕೆ ಸದಸ್ಯ ಬಿ.ವಿ.ಮಂಜು ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕುಡಿಯುವ ನೀರನ್ನು ಹಿಂದಿನಂತೆಯೇ ಶುದ್ಧೀಕರಿಸಿ ನೀಡಲಾಗುತ್ತಿದೆ. ಮಳೆ ಬಂದಿರುವುದರಿಂದ ಹೊಸ ನೀರು ಬರುತ್ತಿದೆ. ನಿವಾಸಿಗಳು ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು ಎಂದು ಪಾಲಿಕೆ ಈಗಾಗಲೇ ತಿಳಿಸಿದೆ.
ಇಲ್ಲಿ ₹ 5 ನಾಣ್ಯ ಹಾಕಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ತೆಗೆದುಕೊಳ್ಳುವವರೇ ಅಧಿಕ. ಈ ನೀರು ನಿಜಕ್ಕೂ ಶುದ್ಧವಾಗಿದೆಯೇ ಎಂದು ಪರೀಕ್ಷಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಇಲ್ಲಿನ ಅಕ್ಕಮ್ಮಣ್ಣಿ ಸರ್ಕಾರಿ ಪ್ರಾಥಮಿಕ ಆರೋಗ್ಯದ ಸಿಬ್ಬಂದಿ ಅನಾರೋಗ್ಯಪೀಡಿತರ ಮೇಲೆ ನಿಗಾ ಇಟ್ಟಿದ್ದಾರೆ. ದೂರು ಬಂದ ಕಡೆ ಧಾವಿಸಿ, ನೀರಿನ ಪರಿಶೀಲನೆ ನಡೆಸಿದ್ದಾರೆ.