ಮೈಸೂರು: ಅಕ್ಷಯತೃತೀಯ ಅಂಗವಾಗಿ ಜನರು ಚಿನ್ನ ಖರೀದಿಗೆ ಮುಗಿಬಿದ್ದಿದ್ದರಿಂದ ಭಾನುವಾರ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಜನಜಂಗುಳಿ ಉಂಟಾಯಿತು. ಬೆಲೆ ಏರಿಕೆ ನಡುವೆಯೂ ಜನರು ಮಳಿಗೆಗಳಿಗೆ ಬಂದು ಚಿನ್ನ ಖರೀದಿಸಿದರು.
ಅಶೋಕ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಬಿ.ಎನ್.ರಸ್ತೆ ಸೇರಿದಂತೆ ಆಭರಣ ಮಳಿಗೆಗಳು ಹೆಚ್ಚು ಇರುವ ಕಡೆ ಸಂಚಾರ ದಟ್ಟಣೆ ಉಂಟಾಯಿತು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಜ್ಯುವೆಲ್ಲರ್ ಅಸೋಸಿಯೇಷನ್ ಅಧ್ಯಕ್ಷ ಅಮರನಾಥ್, ‘ಮಾಮೂಲಿ ದಿನಗಳಿಗಿಂತ ಹತ್ತು ಪಟ್ಟು ಹೆಚ್ಚು ವ್ಯಾಪಾರವಾಗಿದೆ. ಬೆಲೆ ಏರಿಕೆಯಾಗಿದ್ದರೂ, ಖರೀದಿಗೆ ಗ್ರಾಹಕರು ಹಿಂದೇಟು ಹಾಕಲಿಲ್ಲ. ಕೋವಿಡ್ ಬಳಿಕ ಉತ್ತಮ ವಹಿವಾಟು ದಾಖಲಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಶನಿವಾರವೇ ಕೆಲವರು ಮುಂಗಡ ಬುಕ್ಕಿಂಗ್ ಮಾಡಿ ತೆರಳಿದ್ದರು. ಭಾನುವಾರ ಬೆಳಿಗ್ಗೆಯಿಂದಲೇ ತೆರೆದಿದ್ದ ಆಭರಣದಂಗಡಿಗಳು ರಾತ್ರಿ ತನಕವೂ ವಹಿವಾಟು ನಡೆಸಿದವು.
Highlights - ಬ್ಬಳ್ಳಿ: ಅಕ್ಷಯ ತೃತೀಯ ಅಂಗವಾಗಿ ಜನರು ಚಿನ್ನ ಖರೀದಿಗೆ ಮುಗಿಬಿದ್ದಿದ್ದರಿಂದ ಭಾನುವಾರ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಬೆಲೆ ಏರಿಕೆ ನಡುವೆಯೂ ಜನರು ಮಳಿಗೆಗಳಿಗೆ ಬಂದು ಚಿನ್ನ ಖರೀದಿಸಿದರು. ನಗರದ ಸರಾಫ್ ಗಟ್ಟಿ, ಜವಳಿ ಸಾಲು, ದುರ್ಗದಬೈಲು, ಶಹಾ ಬಜಾರ್, ಬ್ರಾಡ್ಬೇಗಳಲ್ಲಿರುವ ಮಳಿಗೆಗಳು ಜನರಿಂದ ತುಂಬಿದ್ದವು. ಹೆಚ್ಚಿನ ಜನರು ಚಿನ್ನ ಖರೀದಿಗೆ ಬಂದಿದ್ದರಿಂದ ಈ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ತನಿಷ್ಕ್, ಮಲಬಾರ್ ಗೋಲ್ಡ್, ಜೋಯಾಲುಕಾಸ್ ಮಳಿಗೆಗಳಲ್ಲೂ ಜನರು ಚಿನ್ನ ಖರೀದಿ ಮಾಡಿದರು. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉತ್ತರ ಕರ್ನಾಟಕ ಜುವೆಲ್ಲರ್ ಅಸೋಸಿಯೇಷನ್ ಮಹಾಸಭಾದ ಅಧ್ಯಕ್ಷ ಗೋವಿಂದ ನಿರಂಜನ ಅವರು, ‘ಕೋವಿಡ್ ಅವಧಿಗೆ ಹೋಲಿಸಿದರೆ ಈ ಬಾರಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ದರ ಹೆಚ್ಚಾಗಿದೆ. ಆದರೂ ಜನರು ಮಳಿಗೆಗಳಿಗೆ ಬಂದು ಖರೀದಿ ಮಾಡಿದ್ದಾರೆ’ ಎಂದರು. ‘ಸದ್ಯ 10 ಗ್ರಾಂ ಚಿನ್ನಕ್ಕೆ ₹61 ಸಾವಿರ, ಒಂದು ಕೆ.ಜಿ ಬೆಳ್ಳಿಯ ದರ ₹72 ಸಾವಿರ ಇದೆ. 10 ಗ್ರಾಂ ಚಿನ್ನದ ದರ ಕಳೆದ ವರ್ಷಕ್ಕೆ ಹೋಲಿಸಿದರೆ ₹14 ಸಾವಿರ ಹೆಚ್ಚಾಗಿದೆ. ಅಕ್ಷಯ ತೃತೀಯ ದಿನ ಖರೀದಿಸಿದರೆ ಒಳ್ಳೆಯದು ಎಂಬ ಕಾರಣಕ್ಕೆ 10 ಗ್ರಾಂ ಖರೀದಿಸುತ್ತಿದ್ದವರು, ಕೇವಲ 3–4 ಗ್ರಾಂ ಖರೀದಿಸಿದರು’ ಎಂದು ಹೇಳಿರು. ‘ಉಕ್ರೇನ್–ರಷ್ಯಾ ಯುದ್ಧ, ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಹೆಚ್ಚಾಗಿರುವುದು ಸೇರಿದಂತೆ ಹಲವು ಕಾರಣಗಳಿಂದ ಚಿನ್ನದ ದರ ಹೆಚ್ಚಾಗಿದೆ. ಚುನಾವಣಾ ನೀತಿ ಸಂಹಿತೆ ಕಾರಣ ಮುಂಬೈ, ಕೊಯಮತ್ತೂರುಗಳಿಂದ ಬರುತ್ತಿದ್ದ ಲಘು ತೂಕದ ಫ್ಯಾನ್ಸಿ ಚಿನ್ನಾಭರಣಗಳ ಪೂರೈಕೆ ಕಡಿಮೆ ಆಗಿದೆ. ಇದು ಸಹ ದರ ಹೆಚ್ಚಲು ಕಾರಣ ಎಂದು ತಿಳಿಸಿದರು. ‘ಕೋವಿಡ್ ಅವಧಿಗೆ ಹೋಲಿಸಿದರೆ ಈ ವರ್ಷ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಕ್ಷಯ ತೃತೀಯ ಅಂಗವಾಗಿ ವಜ್ರಾಭರಣ, ಚಿನ್ನಾಭರಣಗಳಲ್ಲಿ ಹೊಸ ವಿನ್ಯಾಸಗಳನ್ನು ಪರಿಚಯಿಸಲಾಗಿತ್ತು. ಗ್ರಾಹಕರು ಖುಷಿಯಿಂದ ಖರೀದಿಸಿದರು’ ಎಂದು ತನಿಷ್ಕ್ ಜ್ಯುವೆಲ್ಲರ್ಸ್ ಹುಬ್ಬಳ್ಳಿ ಬ್ರ್ಯಾಂಚ್ನ ನಿರ್ದೇಶಕ ನಿಖಿಲ್ ಟಕ್ಕರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.