ಮೈಸೂರು: ‘ತಾಯಿ’ ಎಂಬ ವಿಷಯ ವಸ್ತುವನ್ನು ಇಲ್ಲಿನ ರಂಗಾಯಣದಲ್ಲಿ ಡಿ.10 ರಿಂದ 19ರವರೆಗೆ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಪ್ರಧಾನ ವಿಷಯ ವಸ್ತುವನ್ನಾಗಿ ಪರಿಗಣಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದರು.
ನಾಟಕೋತ್ಸವವನ್ನು ವೃಕ್ಷಮಾತೆ ಎಂದು ಖ್ಯಾತರಾದ ತುಳಸಿಗೌಡ ಉದ್ಘಾಟಿಸಲಿದ್ದಾರೆ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟಿ ಮಾಳವಿಕಾ ಅವಿನಾಶ್, ಪರಿಸರವಾದಿ ಸುರೇಶ್ ಹೆಬ್ಳೀಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸಾಹಿತಿಗಳಾದ ನಾ.ಡಿಸೋಜಾ, ವಿಜಯಲಕ್ಷ್ಮಿ ಬಾಳೆಕುಂದ್ರಿ ಸೇರಿದಂತೆ ಅನೇಕ ಗಣ್ಯರು ನಾಟಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಡಿ.13ರಂದು ಸಂಜೆ 4ಕ್ಕೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸಮಾರೋಪ ಭಾಷಣ ಮಾಡುವರು ಎಂದರು.
ಕನ್ನಡದ 21 ನಾಟಕಗಳು, ಹಿಂದಿಯ 2 ಹಾಗೂ ಇಂಗ್ಲಿಷ್, ಪಂಜಾಬಿ, ಒರಿಯಾ, ಮರಾಠಿ, ಮಲಯಾಳಂ, ತೆಲುಗು, ರಾಜಸ್ಥಾನಿ, ತಮಿಳು, ತುಳು, ಕೊಂಕಣಿ ಭಾಷೆಗಳ ತಲಾ ಒಂದೊಂದು ನಾಟಕಗಳ ಪ್ರದರ್ಶನ ಇರಲಿದೆ. ಒಟ್ಟು19 ಬಗೆಯ ಜನಪದ ಕಲಾ ಪ್ರದರ್ಶನಗಳೂ ನಡೆಯಲಿವೆ ಎಂದರು.