ಮೈಸೂರು: ಜೆಎಸ್ಎಸ್ ಮಹಾವಿದ್ಯಾಪೀಠದ 70ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜೆಎಸ್ಎಸ್ ಆಸ್ಪತ್ರೆಯಲ್ಲಿ ಆರಂಭವಾಗಿರುವ ‘ಗರ್ಭಿಣಿ ಮತ್ತು ಹೆರಿಗೆ ಆರೈಕೆ ಅಭಿಯಾನ’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಮೇ 24ರಂದು ಅಭಿಯಾನವು ಆರಂಭವಾಗಿದ್ದು, ಜೂನ್ 30ರವರೆಗೆ ನಡೆಯಲಿದೆ. ಹೆರಿಗೆ ಉಚಿತ ಸೌಲಭ್ಯ ಹಾಗೂ ಶೇ40– 50ರಷ್ಟು ರಿಯಾಯಿತಿ ದರದಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನೀಡಲಾಗಿದೆ. 53 ಗರ್ಭಿಣಿಯರು ಪ್ರಯೋಜನ ಪಡೆದಿದ್ದಾರೆ’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟ್ಸೂರಮಠ ಹೇಳಿದರು.
ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ, ‘53 ಗರ್ಭಿಣಿಯರಲ್ಲಿ 23 ಮಂದಿ ಸಾಮಾನ್ಯ ಹೆರಿಗೆ ಹಾಗೂ 30 ಮಂದಿ ಸಿಸೇರಿಯನ್ ಹೆರಿಗೆ ಮಾಡಲಾಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಅಭಿಯಾನಕ್ಕಾಗಿ 150 ಹಾಸಿಗೆ ಕಾಯ್ದಿರಿಸಲಾಗಿದೆ. ಸಾಮಾನ್ಯ ವಾರ್ಡ್ಗೆ ಮಾತ್ರ ಈ ಸೌಲಭ್ಯ ನೀಡಲಾಗಿದೆ’ ಎಂದರು.
‘ಆಸ್ಪತ್ರೆಯಿಂದ 25 ಕಿ.ಮೀ ವ್ಯಾಪ್ತಿಯೊಳಗೆ ಆಂಬುಲೆನ್ಸ್ ಉಚಿತ ಸೇವೆ ನೀಡಲಾಗಿದೆ. ಅಭಿಯಾನದಿಂದ ಗರ್ಭಿಣಿಯರ ದಾಖಲಾತಿ ಪ್ರಮಾಣವು ಹೆಚ್ಚಾಗಿದೆ. ಗ್ರಾಮೀಣ ಭಾಗದ ಬಡವರು ಹೆಚ್ಚು ಈ ಸೌಲಭ್ಯ ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.
‘ಡಾ.ಮಮತಾ ನೇತೃತ್ವದ 18 ಪ್ರಸೂತಿ ವೈದ್ಯರ ತಂಡವಿದ್ದು, 24 ಮಂದಿ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವೀಧರರು ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಜೊತೆಗೆ ಸುತ್ತಮುತ್ತಲ ಜಿಲ್ಲೆಗಳ ಬಡವರು ಸೌಲಭ್ಯ ಪಡೆದಿದ್ದಾರೆ’ ಎಂದರು.
‘ಜೂನ್ 30ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಬೇರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುತ್ತಿರುವ ಗರ್ಭಿಣಿಯರು ಈ ಅಭಿಯಾನದಡಿ ಆಸ್ಪತ್ರೆಗೆ ದಾಖಲಾಗಬಹುದು. ಮಾಹಿತಿಗೆ ಮೊ.82966 73241, 9945433987 ಸಂಪರ್ಕಿಸಬಹುದು’ ಎಂದು ಹೇಳಿದರು.
‘ಆಸ್ಪತ್ರೆಗೆ ದಾಖಲಾಗಲು ಪ್ರಯಾಣ ವ್ಯವಸ್ಥೆ ಇದ್ದು, ಮೊ.90355 33060 ಅಥವಾ 14455 ಸಂಪರ್ಕಿಸಬೇಕು. ಈ ಸೇವೆ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಮಾತ್ರ ಇರಲಿದೆ’ ಎಂದರು.
ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಸುರೀಂದರ್ ಸಿಂಗ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ, ಡೀನ್ ಡಾ.ಸಿ.ಪಿ.ಮಧು, ವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ, ಡಾ.ಎಸ್.ಮಮತಾ ಹಾಜರಿದ್ದರು.
ರಿಯಾಯಿತಿಯಲ್ಲಿ ಸೀಸೆರಿಯನ್ ಚಿಕಿತ್ಸೆ 25 ಕಿ.ಮೀ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಉಚಿತ ನೆರೆ ಜಿಲ್ಲೆಗಳ ಗರ್ಭಿಣಿಯರಿಂದಲೂ ನೋಂದಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.