ಮೈಸೂರು: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ದೇವಯ್ಯನಹುಂಡಿಯಲ್ಲಿ ಚನ್ನಮ್ಮ ಎನ್ನುವವರ ಮನೆ ಕುಸಿದುಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಶಾಸಕ ಎಸ್.ಎ.ರಾಮದಾಸ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕುಟುಂಬದವರಿಗೆ ಧೈರ್ಯ ತುಂಬಿದರು. ಸ್ಥಳಕ್ಕೆ ನಗರಪಾಲಿಕೆ ಅಧಿಕಾರಿಗಳನ್ನು ಕರೆಸಿ ಸಂಪೂರ್ಣ ಪರಿಶೀಲಿಸಿ ಕೂಡಲೇ ಪರಿಹಾರ ದೊರೆಯುವಂತಾಗಲು ಜಿಲ್ಲಾಧಿಕಾರಿ ಕಚೇರಿಗೆ ರವಾನಿಸುವಂತೆ ಸೂಚಿಸಿದರು.
ಸಂತ್ರಸ್ತರಿಗೆ ಹೊಸದಾಗಿ ಮನೆಯನ್ನು ನಿರ್ಮಿಸಿಕೊಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಗರಪಾಲಿಕೆ ಸದಸ್ಯೆ ಗೀತಾಶ್ರೀ ಯೋಗನಂದ, ಮುಖಂಡರಾದ ಕೆಂಪಣ್ಣ, ಗಿರೀಶ್, ಸತೀಶ್, ಭರತ್, ಸಾಗರ್, ಮಂಜು, ಸಿದ್ದರಾಜು ಮತ್ತು ಅಧಿಕಾರಿಗಳು ಇದ್ದರು.