ಮೈಸೂರು: ‘ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆಯೇ, ಮತದಾರರಿಗೆ ವಾಚ್, ಉಡುಗೊರೆ ನೀಡುವುದು, ಪಾರ್ಟಿ ಆಯೋಜಿಸುವುದು ಮೊದಲಾದ ಆಸೆ–ಆಮಿಷಗಳನ್ನು ಒಡ್ಡಲಾಗುತ್ತಿದೆಯೇ, ಪ್ರತಿಯೊಬ್ಬರಿಗೂ ಸಾವಿರಾರು ರೂಪಾಯಿ ಕೊಡಲಾಗುತ್ತಿದೆಯೇ’ ಎಂಬ ಪ್ರಶ್ನೆಗಳು ಇಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾದವು.
ಜಿಲ್ಲಾ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅಭ್ಯರ್ಥಿಗಳು, ‘ಕ್ಷೇತ್ರವನ್ನು ಈ ಬಾರಿಯ ಚುನಾವಣೆಯಲ್ಲಿ ಕಲುಷಿತಗೊಳಿಸಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮಾತನಾಡಿ, ‘ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿ 5ನೇ ಬಾರಿಗೆ ಅವಕಾಶ ಬಯಸಿರುವ ನಾನು ಮತಕ್ಕಾಗಿ ಯಾರೊಬ್ಬರಿಗೂ ಒಂದು ರೂಪಾಯಿಯನ್ನೂ ನೀಡಿಲ್ಲ. ನಾನೇನಾದರೂ ಕೊಟ್ಟಿರುವ ಬಗ್ಗೆ ಯಾರ ಬಳಿಯಲ್ಲಾದರೂ ದಾಖಲೆಗಳಿದ್ದಲ್ಲಿ ನೀಡಲಿ’ ಎಂದರು.
‘ಕ್ಷೇತ್ರವು ಈವರೆಗೂ ಕಲುಷಿತಗೊಂಡಿರಲಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನೋವು ತಂದಿವೆ. ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ವಾಚ್, ಹಣ ಹಂಚುತ್ತಿದ್ದಾರೆ’ ಎಂದು ಆರೋಪಿಸಿದರು. ‘ಇದು ಇಡೀ ಸಮಾಜಕ್ಕೆ ಗೊತ್ತಿದೆ’ ಎಂದು ಹೇಳಿದರು.
‘ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಸ್ಪರ್ಧಿಸಿದ್ದೇನೆ. 24 ವರ್ಷಗಳಿಂದಲೂ ಶಿಕ್ಷಕರು, ವಿದ್ಯಾರ್ಥಿಗಳ ದನಿಯಾಗಿ ಕೆಲಸ ಮಾಡಿದ್ದೇನೆ. ಶಿಕ್ಷಣ ಕ್ಷೇತ್ರದ ಗುಣಮಟ್ಟ ಸುಧಾರಣೆಗೆ ಶ್ರಮಿಸಿದ್ದೇನೆ. ವಿರೋಧ ಪಕ್ಷದಲ್ಲಿ ಇದ್ದಾಗಲೂ ದುಡಿದಿದ್ದೇನೆ. ಸ್ಥಾನದ ಪಾವಿತ್ರ್ಯ ಹಾಗೂ ಘನತೆ ಹೆಚ್ಚಿಸುವ ಕೆಲಸ ಮಾಡಿದ್ದೇನೆ’ ಎಂದು ತಿಳಿಸಿದರು.
‘ಎಲ್ಲ ವೃಂದದ ಶಿಕ್ಷಕರು ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಗಳಲ್ಲೂ ಸಮಸ್ಯೆ ಇದೆ. ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿಗೆ ಹೋರಾಡುವೆ. ಪಕ್ಷ ಬದಲಿಸಿರಬಹುದು. ಆದರೆ ನನ್ನ ಆದ್ಯತೆ, ಗುರಿ ಹಾಗೂ ಹೋರಾಟದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಆಡಳಿತ ಪಕ್ಷದಲ್ಲಿ ಇರುವುದರಿಂದ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುತ್ತೇನೆ. ಅತಿಥಿ ಶಿಕ್ಷಕರ ಸೇವಾ ಭದ್ರತೆಗೆ ಹೋರಾಟ ಮುಂದುವರಿಸುತ್ತೇನೆ. ಹೀಗಾಗಿ, ಬೆಂಬಲಿಸುವ ವಿಶ್ವಾಸವಿದೆ’ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜನೆ ವಿಚಾರಗಳನ್ನು ಹಂಚಿಕೊಂಡ ಅಭ್ಯರ್ಥಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.