ಮೈಸೂರು: ತಮ್ಮ ಮೃತ ಪುತ್ರನ ಕಟೌಟ್ನೊಂದಿಗೆ, ಮೈಸೂರಿನ ಡಿಆರ್ಸಿ ಮಲ್ಟಿಫ್ಲೆಕ್ಸ್ನಲ್ಲಿ ಕುಟುಂಬವೊಂದು (ತಂದೆ, ತಾಯಿ, ಸಹೋದರ) ಪುನೀತ್ ರಾಜ್ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ವೀಕ್ಷಿಸಿದೆ.
ಇಲ್ಲಿನ ಕುವೆಂಪು ನಗರದ ಮುರಳೀಧರ್ ಕುಟುಂಬವೇ ಸಿನಿಮಾ ವೀಕ್ಷಿಸಿದ್ದು, ಇದೀಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುನೀತ್ ರಾಜ್ಕುಮಾರ್ ಸಹ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಪುನೀತ್ ಎಂದರೇ ಪ್ರಾಣ: ‘ನನ್ನ ಮಗ ಹರಿಕೃಷ್ಣನ್, ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಅವರೆಂದರೇ ಅವನಿಗೆ ಪ್ರಾಣ. ‘ಯುವರತ್ನ’ ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡುಗಳನ್ನು ಡೌನ್ಲೌಡ್ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದ’ ಎಂದು ಮುರಳೀಧರ್ ತಮ್ಮ ಪುತ್ರನ ಅಭಿಮಾನವನ್ನು ಹೇಳಿಕೊಂಡಿದ್ದಾರೆ.
‘2020ರ ಡಿ.13ರಂದು ಸ್ನೇಹಿತನ ಜೊತೆ ವರುಣಾ ನಾಲೆಗೆ ಈಜಲು ಹೋದಾಗ ನೀರಲ್ಲಿ ಮುಳುಗಿ ಮೃತಪಟ್ಟಿದ್ದ. ‘ಯುವರತ್ನ’ ಸಿನಿಮಾ ಬಿಡುಗಡೆಗಾಗಿ ಕಾತರದಿಂದ ಕಾದಿದ್ದ. ಆದ್ದರಿಂದ ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಬರಲು ಮನಸ್ಸಾಗಲಿಲ್ಲ. ಅವನನ್ನು ನಮ್ಮ ಜೊತೆ ಕರೆ ತಂದು, ಅವನಿಗೂ ಟಿಕೆಟ್ ಪಡೆದು ಸಿನಿಮಾ ನೋಡಿದೆವು’ ಎಂದು ಮುರಳೀಧರ್ ಪುತ್ರನ ಕಟೌಟ್ ತೋರಿಸಿ ಕಣ್ಣೀರಿಡುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನಸ್ಸು ಭಾರವಾಯಿತು: ‘ಮೈಸೂರಿನ ಮುರಳೀಧರ್ ಹಾಗೂ ಕುಟುಂಬದವರು, ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೊ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಚಿತ್ರನಟ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ.