ರಾಯಚೂರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಕೃಷ್ಣಾನದಿ ನಡುಗಡ್ಡೆಗಳಾದ ಅಗ್ರಹಾರ, ಕುರ್ವಕಲಾ ಮತ್ತು ಕುರ್ವಕುರ್ದಾ ಗ್ರಾಮಗಳಿಗೆ ಸಂಪರ್ಕ ಕಡಿತವಾಗುವುದು ಮಾಮೂಲು. ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಪ್ರತ್ಯೇಕ ಕಡೆ ಸೇತುವೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. 2010ರಲ್ಲಿ ₹64 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಎರಡು ಸೇತುವೆಗಳ ಶೇ 50 ರಷ್ಟು ಕಾಮಗಾರಿ ಮಾತ್ರ ಆಗಿದೆ. ನಡುಗಡ್ಡೆಗಳಲ್ಲಿ 298 ಕುಟುಂಬಗಳ ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.
* ಪ್ರವಾಹಕ್ಕೆ ಒಳಗಾಗಿದ್ದ ತಾಲ್ಲೂಕಿನ ಗುರ್ಜಾಪುರ ಗ್ರಾಮವನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಕೋರುತ್ತಿದ್ದಾರೆ. ಆದರೆ ಸ್ಥಳಾಂತರ ಇನ್ನೂ ಸಾಧ್ಯವಾಗಿಲ್ಲ.
* ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆಗಳಲ್ಲಿ 10ಕ್ಕೂ ಹೆಚ್ಚು ಗ್ರಾಮಗಳಿದ್ದು, ಜಲದುರ್ಗ ಸೇತುವೆ ಮತ್ತು ಶೀಲಹಳ್ಳಿ ಸೇತುವೆ ಮೂಲಕ ಜನರು ಸಂಚರಿಸುತ್ತಾರೆ. ನಾರಾಯಣಪುರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಸೇತುವೆಗಳು ಮುಳುಗಡೆ ಆಗಿ ನಡುಗಡ್ಡೆ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಪರ್ಯಾಯವಾಗಿ ಕಡದರಗಡ್ಡೆಗೆ ಸೇತುವೆ ನಿರ್ಮಾಣಕ್ಕೆ ಕಳೆದ ವರ್ಷ ಯೋಜಿಸಲಾಗಿತ್ತು. ಇದಕ್ಕೆ ₹18 ಕೋಟಿ ಅನುದಾನ ಕೋರಲಾಗಿದೆ. ಸೇತುವೆ ನಿರ್ಮಾಣ ಇನ್ನೂ ಆರಂಭಿಸಿಲ್ಲ.
* ರಾಯಚೂರು ತಾಲ್ಲೂಕು ಒಂದರಲ್ಲೇ ₹322 ಕೋಟಿಯಷ್ಟು ಹಾನಿ ಆಗಿತ್ತು. ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ, ₹58 ಕೋಟಿ ಬಿಡುಗಡೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಬೆಳೆ, ಮೂಲಸೌಕರ್ಯ ಸೇರಿ ₹242 ಕೋಟಿ ಹಾನಿ ಆಗಿತ್ತು. ಪರಿಹಾರ ರೂಪದಲ್ಲಿ ಸಿಕ್ಕಿದ್ದು ₹39 ಕೋಟಿ ಮಾತ್ರ.
* ಕಳೆದ ವರ್ಷ ಪ್ರವಾಹದಿಂದ 442 ಮನೆಗಳು ಹಾನಿಗೀಡಾಗಿದ್ದವು. ಇವುಗಳಿಗೆ ತಲಾ ₹10 ಸಾವಿರದಂತೆ ಪರಿಹಾರ ಧನ ವಿತರಿಸಲಾಗಿದೆ. ಪ್ರವಾಹದಿಂದ ಜಿಲ್ಲೆಯಲ್ಲಿ 100 ಹೆಕ್ಟೇರ್ಗಿಂತ ಹೆಚ್ಚು ಬೆಳೆ ನಾಶವಾಗಿದೆ. 5,300 ರೈತರಿಗೆ ಪರಿಹಾರದ ರೂಪದಲ್ಲಿ ₹14.16 ಕೋಟಿ ವಿತರಣೆ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.