ರಾಯಚೂರು: ಮೂರು ದಿನ ಸಾಲು ರಜೆಯ ಕಾರಣ ಮಂತ್ರಾಲಯದ ರಾಯರ ಮಠಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ.
ವಾರದ ಹಿಂದೆಯೇ ಮಂತ್ರಾಲಯದ ಯಾತ್ರಿನಿವಾಸಗಳು, ದಾನಿಗಳ ವಸತಿಗೃಹಗಳು ಹಾಗೂ ಖಾಸಗಿ ಲಾಡ್ಜ್ಗಳು ಬುಕ್ ಆಗಿವೆ. ಬುಕ್ ಮಾಡದೇ ನೇರವಾಗಿ ಬೆಂಗಳೂರು, ತುಮಕೂರಿನಿಂದ ಬಂದ ನೂರಾರು ಭಕ್ತರು ಭಾನುವಾರ ವಸತಿ ಸಮಸ್ಯೆ ಅನುಭವಿಸಬೇಕಾಯಿತು.
ಮಂತ್ರಾಲಯದಲ್ಲಿ ವಸತಿ ವ್ಯವಸ್ಥೆ ಆಗದ ಕಾರಣ ಅನೇಕ ಭಕ್ತರು ರಾಯಚೂರಿಗೆ ಬಂದು ಲಾಡ್ಜ್ಗಳಲ್ಲಿ ವಾಸ್ತವ್ಯ ಮಾಡಿ ನಂತರ ಮಂತ್ರಾಲಯ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದರು.
ರಾಯರ ದರ್ಶನಕ್ಕೆ ಕನಿಷ್ಠ ಎರಡು ತಾಸು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಮಠದಲ್ಲಿ ನಿಂತುಕೊಳ್ಳಲು ಸಹ ಸ್ಥಳವಿಲ್ಲದಷ್ಟು ಜನ ದಟ್ಟಣೆ ಉಂಟಾಗಿತ್ತು. ರಥ ಬೀದಿಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಪ್ರಸಾದ ಖರೀದಿಸಲು ಸಹ ಭಕ್ತರು ಪ್ರಯಾಸಯ ಪಡಬೇಕಾಯಿತು. ಇಲ್ಲಿನ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.
ರೈಲು ಹಾಗೂ ಬಸ್ಗಳಲ್ಲಿ ಪ್ರಯಾಣಿಕರು ತುಂಬಿ ಬರುತ್ತಿದ್ದಾರೆ. ಖಾಸಗಿ ವಾಹನಗಳಲ್ಲಿ ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಭಕ್ತರಿಗೆ ವಾಹನಗಳ ಪಾರ್ಕಿಂಗ್ ಮಾಡುವುದು ದೊಡ್ಡ ತಲೆ ನೋವಾಯಿತು. ಮುಖ್ಯದ್ವಾರದ ಬಳಿ ವಾಹನಗಳನ್ನು ತರಲು ಸಾಧ್ಯವಾಗದಷ್ಟು ಜನ ದಟ್ಟಣೆ ಇತ್ತು. ಭದ್ರತಾ ಸಿಬ್ಬಂದಿ ವಾಹನ ದಟ್ಟಣೆ ಹಾಗೂ ಜನದಟ್ಟಣೆ ನಿಯಂತ್ರಿಸಲು ಹರಸಾಹಸ ಮಾಡಬೇಕಾಯಿತು.
ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆಯಲು ಭಕ್ತರ ನೂಕುನುಗ್ಗಲು ಉಂಟಾಯಿತು