ರಾಯಚೂರು: ಮಾಜಿ ಸಂಸದ ಬಿ.ವಿ.ನಾಯಕ ಬೆಂಬಲಿಗರು ಬಿ.ವಿ.ನಾಯಕ ಹೆಸರಿನಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಬೆಳವಣಿಗೆಯು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ ಅಗರವಾಲ್ ಏಪ್ರಿಲ್ 13ರಂದು ರಾಯಚೂರಿಗೆ ಬಂದು ಟಿಕೆಟ್ ಆಕಾಂಕ್ಷಿಗಳು ಹಾಗೂ ಬಿಜೆಪಿ ಮುಖಂಡರ ಸಭೆ ನಡೆಸಿ ರಾಜಾ ಅಮರೇಶ್ವರ ನಾಯಕ ಅವರೇ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದರು. ಬಿ.ವಿ.ನಾಯಕ ಅವರ ಮೂಲಕವೇ ರಾಜಾ ಅಮರೇಶ್ವರ ನಾಯಕ ಅವರಿಗೆ ಬಿ.ಫಾರ್ಮ್ ಕೊಡಿಸಿದ್ದರು.
ಆದರೆ, ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಬಿ.ವಿ ನಾಯಕ, ‘ಪಕ್ಷದ ಟಿಕೆಟ್ಗಾಗಿ ಕೊನೆಯ ಕ್ಷಣದವರೆಗೂ ಕಾಯುವೆ’ ಎಂದು ಹೇಳಿಕೆ ನೀಡಿದ್ದರು.
ರಾಜಾ ಅಮರೇಶ್ವರ ನಾಯಕ ಅವರು ಗುರುವಾರ ನಾಮಪತ್ರ ಸಲ್ಲಿಸುವ ವೇಳೆಗೆ ಬರಬೇಕಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗೈರಾಗಿದ್ದರು. ಪಕ್ಷದ ಜಿಲ್ಲೆಯ ಮುಖಂಡರು ಸಹ ಸಭೆಗೆ ಬಂದಿರಲಿಲ್ಲ. ಕೊನೆಯ ಕ್ಷಣದಲ್ಲಿ ಮೆರವಣಿಗೆಯನ್ನೂ ರದ್ದುಪಡಿಸಲಾಯಿತು.
ಟಿಕೆಟ್ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ಪ್ರಚಾರ ಸಭೆಗೆ ಬರಲು ಕಾರ್ಯಕರ್ತರೂ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
‘ಸೂಚಕ ಕೆ. ಮಲ್ಲಿಕಾರ್ಜುನ ಅವರು ನನ್ನ ಸೂಚನೆಯ ಮೇರೆಗೇ ಗುರುವಾರ ಬಿಜೆಪಿಯಿಂದ ನನ್ನ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಕಲಬುರಗಿ ಹೈಕೋರ್ಟ್ ಪೀಠದಲ್ಲಿ ರಾಜಾ ಅಮರೇಶ್ವರ ನಾಯಕ ಅವರ ಜಾತಿ ಪ್ರಮಾಣಪ್ರತದ ವಿಚಾರಣೆ ಇದೆ. ತೀರ್ಪು ಹೊರ ಬಂದ ನಂತರ ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವೆ‘ ಎಂದು ಮಾಜಿ ಸಂಸದ ಬಿ.ವಿ.ನಾಯಕ ಪ್ರತಿಕ್ರಿಯಿಸಿದ್ದಾರೆ.