ರಾಯಚೂರು: ಆರೋಗ್ಯಕ್ಕೆ ಅಗತ್ಯವಾದ ಅಣಬೆಯನ್ನು ಎಲ್ಲರೂ ಬೆಳೆಯಬೇಕು. ಮನೆಗಳು ಹಾಗೂ ಶಾಲೆಗಳಲ್ಲಿ ಕೈತೋಟ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜಿ. ಎಸ್. ಯಡಹಳ್ಳಿ ಹೇಳಿದರು.
ರಾಯಚೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ‘ಆರೋಗ್ಯದಾಯಕ ಅಣಬೆ ಮತ್ತು ಮನೆಯ ಕೈತೋಟ’ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ಅನುಪಮಾ ಸಿ.ಮಾತನಾಡಿ, ನ್ಯೂನಪೋಷಣೆ ಹೆಚ್ಚಾಗಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೋಷಕಾಂಶ ಸುಭದ್ರತೆಗಾಗಿ ಅಣಬೆ ಮತ್ತು ಮನೆಯ ಕೈತೋಟ ಮಾಡುವುದರ ಮಹತ್ವ ವಿವರಿಸಿದರು.
ಮುನಿರಾಬಾದ್ನ ಪ್ರಗತಿಪರ ಅಣಬೆ ಕೃಷಿಕ ಟಿ. ಸತ್ಯನಾರಾಯಣ ಮಾತನಾಡಿದರು. ತರಬೇತಿಯಲ್ಲಿ ರೈತ ಹಾಗೂ ರೈತ ಮಹಿಳೆಯರಿಗೆ ಅಣಬೆಯ ಪ್ರಾತ್ಯಕ್ಷಿಕೆಯ ಮುಖಾಂತರ ಉತ್ಪಾದನೆ ಮತ್ತು ಮಾರಾಟದ ಕುರಿತು ತಿಳಿಸಿ ಕೊಡಲಾಯಿತು.
ಕೀಟಶಾಸ್ತ್ರ ವಿಜ್ಞಾನಿ ಡಾ.ಶ್ರೀವಾಣಿ ಜಿ.ಎನ್. ಮತ್ತು ಕೃಷಿ ವಿಜ್ಞಾನ ಕೇಂದ್ರದ ವ್ಯವಸ್ಥಾಪಕ ಎಂ.ಸಿ. ಪಾಟೀಲ ಹಾಗೂ 40 ರೈತರು ಮತ್ತು ರೈತ ಮಹಿಳೆಯರು ಇದ್ದರು.