ರಾಯಚೂರು: ಆನೇಕಾಲು ರೋಗ ನಿರ್ಮೂಲನೆಗೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಹೇಳಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಹತ್ತಿರ ಶನಿವಾರ ಆಯೋಜಿಸಿದ್ದ ಆನೇಕಾಲು ರೋಗಕ್ಕೆ ಡಿಇಸಿ ಮಾತ್ರೆ ನುಂಗಿಸುವ ತಾಲ್ಲೂಕುಮಟ್ಟದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಆನೆಕಾಲು ರೋಗದಿಂದ ಮುಕ್ತರಾಗಲು ಡಿಇಸಿ ಮತ್ತು ಅಲ್ಬೆಂಡಜೊಲ್ ಮಾತ್ರೆಯನ್ನು ತಪ್ಪದೇ ನುಂಗಬೇಕು ಎಂದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಯಿನುದ್ದೀನ್ ಮಾತನಾಡಿ, ಸೆ. 24ರಂದು ಆನೆಕಾಲು ರೋಗಕ್ಕೆ ಸಾಮೂಹಿಕವಾಗಿ ಡಿಇಸಿ ಮಾತ್ರೆ ನುಂಗಿಸುವ ಕಾರ್ಯಕ್ರಮ ನಡೆಯಲಿದ್ದು, 5,25,501 ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
571 ಔಷಧಿ ನುಂಗಿಸುವವರು ಹಾಗೂ 57 ಮೇಲ್ವಿಚಾರಕರನ್ನು ಈ ಕಾರ್ಯಕ್ಕೆ ಗುರುತಿಸಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರತಿದಿನ 50 ಮನೆಗಳಿಗೆ ಭೇಟಿ ನೀಡಿ, ವಯಸ್ಸಿಗೆ ಅನುಗುಣವಾಗಿ ಮಾತ್ರೆ ನೀಡುತ್ತಾರೆ ಎಂದರು.
2 ವರ್ಷದೊಳಗಿನವರು, ಗರ್ಭಿಣಿಯರು ಹಾಗೂ ಗಂಭೀರ ರೋಗ ಇರುವವರು ಮಾತ್ರೆ ಸೇವಿಸಬಾರದು ಎಂದು ತಿಳಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಆರ್ಬಿಎಸ್ಕೆ ವೈದ್ಯಾಧಿಕಾರಿಗಳು. ಜಿಲ್ಲಾ ಹಿರಿಯ ಆರೋಗ್ಯ ಸಹಾಯಕರು, ಔಷಧ ತಜ್ಞರು, ಪ್ರಯೋಗಶಾಲೆ ತಂತ್ರಜ್ಞರು ಇದ್ದರು.