ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಪ್ತವಾಗಿ ಆಲಿಸಿದರು. ಕುಡಿಯುವ ನೀರು ಒದಗಿಸುವುದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ. ಯಾವುದಾದರೂ ಮೂಲಗಳಿಂದ ನೀರು ಒದಗಿಸಲಾಗುವುದು ಎಂದು ಜನವರಿಗೆ ಮನವರಿಕೆ ಮಾಡಿದರು.
ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದ ಬಗ್ಗೆ ಕೆಲವರು ಶ್ಲಾಘಿಸಿದರು. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸಮರ್ಪಕವಾಗಿ ಪೇಮೆಂಟ್ ಮಾಡುತ್ತಿಲ್ಲ, ಉದ್ಯೋಗ ನೀಡುತ್ತಿಲ್ಲ ಎನ್ನುವ ದೂರು ಹೇಳಿದರು. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ವಿಶೇಷವಾಗಿತ್ತು... ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 40 ಕರೆಗಳನ್ನು ಸ್ವೀಕರಿಸಲಾಯಿತು. ಕರೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ...
*ನಾಸೀರ್, ಕಲ್ಲೂರು ಗ್ರಾಮ ಸಿರವಾರ ತಾಲ್ಲೂಕು: ಗ್ರಾಮ ಪಂಚಾಯಿತಿಯಲ್ಲಿ ಶೇ 3 ರಷ್ಟು ಅನುದಾನ ಅಂಗವಿಕಲರಿಗೆ ಮೀಸಲಿದೆ. ವಾಹನಕ್ಕಾಗಿ ಅರ್ಜಿ ಸಲ್ಲಿಸಿದರೂ ಕೊಟ್ಟಿಲ್ಲ.
ಸಿಇಒ: ಅಂಗವಿಕಲರಿಗೆ ಮೊಪೆಡ್ ಬೈಕ್ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಒಂದು ತಿಂಗಳಲ್ಲಿ ವಾಹನಗಳು ಬರಲಿವೆ. ಅನುದಾನ ಲಭ್ಯವಿದ್ದಷ್ಟು ಖರೀದಿಸಿ ಹಂಚಿಕೆ ಮಾಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಜೆಟ್ ಅನುಸಾರ ಮೊಪೆಡ್ ಒದಗಿಸಲಾಗುವುದು. ಇನ್ನೊಂದು ತಿಂಗಳಲ್ಲಿ ಶೇ 3 ರಷ್ಟು ಮೀಸಲು ಅನುದಾನ ವೆಚ್ಚವಾಗಲಿದೆ.
*ರಾಜು, ರಂಗಾಪುರ ಕ್ಯಾಂಪ್, ಮಸ್ಕಿ ತಾಲ್ಲೂಕು: ಉದ್ಯೋಗ ಖಾತರಿಯಡಿ ಕೆಲಸ ಮಾಡಿದರೂ ಕೂಲಿ ಬಂದಿಲ್ಲ.
ಸಿಇಒ: ಉದ್ಯೋಗ ಖಾತರಿಯಡಿ ಕೆಲಸ ಮಾಡಿದವರಿಗೆ ಶೇ 99.97ರಷ್ಟು ಹಣ ಸಂದಾಯವಾಗುತ್ತಿದೆ. ಕೇವಲ ಶೇ 0.03 ಖಾತೆಗಳಲ್ಲಿ ತಾಂತ್ರಿಕ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದ್ದು, ಒಂದು ವಾರದಲ್ಲಿ ಪರಿಹಾರ ಸಿಗಲಿದೆ. ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡಿದವರಿಗೆ ನೂರಕ್ಕೆ ನೂರರಷ್ಟು ಕೂಲಿ ಜಮಾ ಆಗುತ್ತದೆ; ಈ ಬಗ್ಗೆ ಭಯ ಬೇಡ.
*ಅನಂತ, ಗಬ್ಬೂರು, ದೇವದುರ್ಗ ತಾಲ್ಲೂಕು: ಗ್ರಾಮದಲ್ಲಿ ಕೊಳವೆಬಾವಿ ಹಾಕಿದ್ದರೂ ಸರಿಯಾಗಿ ನೀರು ಬರುತ್ತಿಲ್ಲ.
ಸಿಇಒ: ಪಿಡಿಓ ಮತ್ತು ಎಂಜಿನಿಯರ್ ಅವರನ್ನು ಕಳುಹಿಸಿ ಪರಿಶೀಲನೆ ಮಾಡುತ್ತೇನೆ. ಏನು ಪರಿಹಾರ ಮಾಡಬೇಕು ಎಂಬುದನ್ನು ಅವರು ತಿಳಿಸುತ್ತಾರೆ. ಕಳೆದ ವಾರ ಗಬ್ಬೂರಿಗೆ ಭೇಟಿ ನೀಡಿದಾಗ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ದೇವಸ್ಥಾನದ ಬಳಿ ಕೊಳವೆಬಾವಿ ಎಂದು ನಿರ್ದಿಷ್ಟವಾಗಿ ಹೇಳಿದ್ದರಿಂದ ಖಂಡಿತ ಪರಿಶೀಲನೆ ಮಾಡುತ್ತೇನೆ.
*ಸಬೀರ ಅಲಿ, ಸಾಲಗುಂದಾ, ಸಿಂಧನೂರು: ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇದರಲ್ಲಿ ಅಕ್ರಮ ನಡೆದಿದೆ.
ಸಿಇಒ: ಸಾಲಗುಂದಾದಲ್ಲಿ ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ ಆಗಿದೆ ಎಂಬುದನ್ನು ಪರಿಶೀಲಿಸಲು ಎಡಿ ನರೇಗಾ ಅವರಿಗೆ ಸೂಚಿಸಲಾಗುವುದು. ಅಕ್ರಮದ ಬಗ್ಗೆ ತನಿಖೆ ನಡೆಸಲಾಗುವುದು.
*ಮರಿಸ್ವಾಮಿ, ಆಕಳಕುಂಪಿ, ದೇವದುರ್ಗ ತಾಲ್ಲೂಕು: ಬಿತ್ತನೆ ಬೀಜಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಸಿಇಒ: ಈ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನಿರ್ದೇಶನ ನೀಡಿ ಸಿರವಾರದ ಅಂಗಡಿಗಳಲ್ಲಿ ತನಿಖೆ ಮಾಡಲಾಗುವುದು.
*ವೆಂಕಟೇಶ, ಜಕ್ಕೇರಮಡು ತಾಂಡಾ: ಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆ ಇದೆ. ಸಿಸಿ ರಸ್ತೆಗಳಿಗೆ ಪಕ್ಕದಲ್ಲಿ ಮಣ್ಣು ಹಾಕಿಲ್ಲ. ಚರಂಡಿಹಾಕಿಲ್ಲ.
ಸಿಇಒ: ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡುವ ಕೆಲಸ ನಡೆಯುತ್ತಿದ್ದು, ಈಗಾಗಲೇ 100 ಪ್ಲಾಂಟ್ಗಳನ್ನು ದುರಸ್ತಿ ಮಾಡಲಾಗಿದೆ. ಇನ್ನುಳಿದ 90 ಪ್ಲಾಂಟ್ಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಜೂನ್ ಅಂತ್ಯದೊಳಗೆ ಎಲ್ಲ ಪ್ಲಾಂಟ್ಗಳು ಕಾರ್ಯನಿರ್ವಹಿಸಲಿವೆ.
*ವಿಜಯಲಕ್ಷ್ಮೀ, ಮಟಮಾರಿ, ರಾಯಚೂರು ತಾಲ್ಲೂಕು: ವೀರಭದ್ರೇಶ್ವರ ದೇವಸ್ಥಾನ ಬಹಳಷ್ಟು ಹತ್ತಿರದಲ್ಲೇ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ತೆರವು ಮಾಡುತ್ತಿಲ್ಲ.
*ಸಿಇಒ: ಕೂಡಲೇ ಪಿಡಿಒ ಅವರಿಗೆ ಈ ಬಗ್ಗೆ ನಿರ್ದೇಶನ ಕೊಟ್ಟು, ಕ್ರಮ ಕೈಗೊಳ್ಳಲಾಗುವುದು.
* ಕಮಲಾಪುರ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು: ಉದ್ಯೋಗ ಖಾತರಿಯಲ್ಲಿ ಕೂಲಿ ಮಾಡದೆ ಹಣ ಎತ್ತಲಾಗುತ್ತಿದೆ. ಖಾತೆಯಲ್ಲಿ ಹಣ ಮಾಡಿಸಿ, ಜನರಿಂದ ಹಣ ವಾಪಸ್ ಪಡೆಯುತ್ತಿದ್ದಾರೆ.
ಈ ರೀತಿ ದೂರುಗಳು ಬಹಳಷ್ಟು ಕಡೆಗಳಿಂದ ಬಂದಿದ್ದರಿಂದ ಕಳೆದ ವರ್ಷ ಪರಿಶೀಲನೆ ಮಾಡಲಾಗಿತ್ತು. ಅಂತಹ ಕಾಮಗಾರಿಗಳನ್ನು ತಿರಸ್ಕಾರ ಮಾಡಲಾಗಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮವೂ ಆಗಿದೆ. ಈ ಸಲ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳ ತಂಡ ಕರೆಯಿಸಿ ಕ್ರಾಸ್ ತಪಾಸಣೆ ಮಾಡಿಸಲಾಗುತ್ತಿದೆ. ಕಾಮಗಾರಿ ನಡೆಯದೆ, ಹಣ ಹೋಗಿದ್ದನ್ನು ತಡೆಯುವುದಕ್ಕೆ ಆದಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ.
*ವಿರೇಶ, ಸಿಂಗನೋಡಿ, ರಾಯಚೂರು ತಾಲ್ಲೂಕು: ಕುಡಿಯುವ ನೀರಿನ ಸಮಸ್ಯೆ ಇದೆ. ಉದ್ಯೋಗ ಖಾತರಿ ಯೋಜನೆ ಆಗುತ್ತಿಲ್ಲ. ಅರ್ಜಿ ಕೊಟ್ಟರೂ ಕೆಲಸ ಕೊಡುತ್ತಿಲ್ಲ.
ಸಿಇಒ: ಸಿಂಗನೋಡಿ, ಚಂದ್ರಬಂಡಾ, ಬಾಯಿದೊಡ್ಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಟಾಸ್ಕ್ಫೋರ್ಸ್ನಲ್ಲಿ ಯೋಜನೆ ಮಾಡಲಾಗಿದ್ದು, ನದಿಯಿಂದ ನೀರೊದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಉದ್ಯೋಗ ಕೋರಿ ಫಾರ್ಮ್ 6 ರಷ್ಟು ಬಂದಿದೆ ಎಂಬುದನ್ನು ಕೇಳಿಕೊಂಡು, ಉದ್ಯೋಗ ಒದಗಿಸಲು ಸೂಚಿಸುತ್ತೇನೆ.
*ಶರಣಪ್ಪ, ಅನ್ವರಿ ಗ್ರಾಮ, ಲಿಂಗಸುಗೂರು ತಾಲ್ಲೂಕು: ಬಳಕೆಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಅನೇಕ ವರ್ಷಗಳಿಂದ ಸಮಸ್ಯೆ ಮುಂದುವರಿದಿದೆ.
ಸಿಇಒ: ನೀರಿನ ಸಮಸ್ಯೆ ಪರಿಶೀಲಿಸುವುದಕ್ಕೆ ಎಇಇ, ಇಒ ಅವರನ್ನು ಗ್ರಾಮಕ್ಕೆ ಕಳುಹಿಸಿ ವರದಿ ಪಡೆದುಕೊಳ್ಳುತ್ತೇನೆ. ಸಮಸ್ಯೆಗೆ ಏನು ಪರಿಹಾರ ಮಾಡಬೇಕು ಎಂಬುದನ್ನು ಯೋಜಿಸುತ್ತೇವೆ.
*ಮೊಹ್ಮದ್ ಮುಜಾಹಿದ್, ಮರ್ಚಡ್, ರಾಯಚೂರು ತಾಲ್ಲೂಕು: ಉದ್ಯೋಗ ಖಾತರಿಯಡಿ ಕೆರೆ ಹೂಳು ತೆಗೆದು, ಅಲ್ಲಿಯೇ ಬಿಟ್ಟಿದ್ದಾರೆ.
ಸಿಇಒ:‘ಹೂಳು ತೆಗೆದುಕೊಳ್ಳಲು ರೈತರಿಗೆ ಅವಕಾಶ ಇದೆ. ಒಂದು ವೇಳೆ ರೈತರು ತೆಗೆದುಕೊಳ್ಳದಿದ್ದರೆ, ಬೇರೆ ಕಡೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.
*ರವಿ, ಪುರತಿಪ್ಲಿ, ರಾಯಚೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಹಣ ಜಮಾ ಆಗಿಲ್ಲ. ಬ್ಯಾಂಕ್ಗೆ ಅರ್ಜಿ ಸಲ್ಲಿಸಿದರೂ ಸಾಲ ಕೊಡುತ್ತಿಲ್ಲ.
ಸಿಇಒ: ನೋಂದಣಿ ಮಾಡಿರುವುದನ್ನು ಪರಿಶೀಲಿಸಿ, ಏನಾಗಿದೆ ಎಂಬುದನ್ನು ಪರಿಶೀಲನೆ ಮಾಡಿ, ಹೇಳುತ್ತೇನೆ. ಬ್ಯಾಂಕ್ ಸಾಲದ ಬಗ್ಗೆ ಅವರೇ ನಿರ್ಧರಿಸುತ್ತಾರೆ. ಅಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶವಿಲ್ಲ.
* ವೀರೇಶ, ಮಲಿಯಾಬಾದ್, ರಾಯಚೂರು ತಾಲ್ಲೂಕು: ನಮ್ಮೂರಲ್ಲಿ ಉದ್ಯೋಗ ಖಾತರಿ ಯೋಜನೆ ಆರಂಭಿಸಿಲ್ಲ. ನೀರಿನ ಸಮಸ್ಯೆ ಇದೆ.
ಸಿಇಒ: ಕೊರೊನಾ ಪಾಜಿಟಿವ್ ಕೇಸ್ ಇದ್ದುದರಿಂದ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿತ್ತು. ಈಗ ನಿರ್ಬಂಧನೆ ತೆರವಾಗಿದ್ದರೆ ಕೂಡಲೇ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಆರಂಭಿಸಲು ಪಿಡಿಒ ಅವರಿಗೆ ಸೂಚಿಸುತ್ತೇನೆ. ಮಲಿಯಾಬಾದ್, ಮಿಟ್ಟಿಮಲ್ಕಾಪುರನಲ್ಲಿ ನೀರಿನ ಸಮಸ್ಯೆ ಇದೆ. ತಾತ್ಕಾಲಿಕವಾಗಿ ಖಾಸಗಿ ಕೊಳವೆಬಾವಿಯಿಂದ ನೀರು ಕೊಡಲಾಗುತ್ತಿದೆ. ಜಲ್ಜೀವನ್ ಮಿಷನ್ಡಿ ಶಾಶ್ವತ ಪರಿಹಾರ ಕಲ್ಪಿಸಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ.
*ಶಾಂತಕುಮಾರ್, ಹೇಮನಾಳ ಗ್ರಾಮ, ದೇವದುರ್ಗ ತಾಲ್ಲೂಕು: ಅರ್ಜಿ ಕೊಟ್ಟು ಒಂದು ತಿಂಗಳಾದರೂ ಉದ್ಯೋಗ ಕೊಡುತ್ತಿಲ್ಲ.
ಸಿಇಒ: ಈ ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಮಾತನಾಡಿ, ಕೆಲಸ ಕೊಡುವುದಕ್ಕೆ ಸೂಚಿಸಲಾಗುವುದು.
*ಹನುಮಂತ, ಕುರ್ಡಿ, ಮಾನ್ವಿ ತಾಲ್ಲೂಕು: ವಾರ್ಡ್ 6 ರಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ಸಿಇಒ: ಎರಡು ವಾರ್ಡ್ಗಳಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿತ್ತು. ಪರಿಹಾರ ಮಾಡಲಾಗಿದ್ದು, ಮತ್ತೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಿ, ಆದ್ಯತೆಯಿಂದ ನೀರು ಒದಗಿಸಲಾಗುವುದು.
*ಬಸವರಾಜ, ಕೋತದೊಡ್ಡಿ, ದೇವದುರ್ಗ: ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಮಾಡುತ್ತಿಲ್ಲ.
ಸಿಇಒ: ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಾಣಕ್ಕೆ ಎಲ್ಲ ಪಿಡಿಒಗಳಿಗೆ ಸೂಚಿಸಲಾಗಿದೆ. ನೀರು ಇಲ್ಲದ ಕಡೆಗಳಲ್ಲಿ ಅದನ್ನು ತುಂಬಿಸುವ ಹೊಣೆಗಾರಿಕೆಯನ್ನು ಪಂಚಾಯಿತಿಯಿಂದ ಮಾಡುವುದಿಲ್ಲ. ನೀರಿನ ಲಭ್ಯತೆ ನೋಡಿಕೊಂಡು ಪಿಡಿಒಗಳು ಕ್ರಮ ಕೈಗೊಳ್ಳುತ್ತಾರೆ. ದನದ ಶೆಡ್ ಕೂಡಾ ಮಾಡಿಸಿಕೊಳ್ಳಬಹುದು.
*ಸಾಬೀರ್, ಮರ್ಚೆಡ್, ರಾಯಚೂರು ತಾಲ್ಲೂಕು: ಅರಬ್ ಮೊಹಲ್ಲಾದಲ್ಲಿ ನೀರಿನ ಸಮಸ್ಯೆ ಇದೆ ಎಂದು ಡಿಸೆಂಬರ್ನಿಂದ ಮನವಿ ಕೊಡುತ್ತಿದ್ದೇವೆ.
ಸಿಇಒ: ಕುಡಿಯುವ ನೀರು ಒದಗಿಸಲು ಅನುದಾನದ ಕೊರತೆಯಿಲ್ಲ. ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚಿಸಿ, ನೀರು ಒದಗಿಸುತ್ತೇವೆ.
*ಮರ್ಚೆಡ್, ಜುನೇದ ಬಗ್ದಾದ್, ರಾಯಚೂರು ತಾಲ್ಲೂಕು: ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದರೂ ಅನುದಾನ ಬಿಡುಗಡೆ ಮಾಡಿಲ್ಲ
ಸಿಇಒ: ಇವತ್ತೇ ಪರಿಶೀಲನೆ ಮಾಡುತ್ತೇನೆ. ದಾಖಲೆಗಳಲ್ಲಿ ಎಲ್ಲವೂ ಸರಿಯಾಗಿದ್ದರೆ, ಕೂಡಲೇ ಅನುದಾನ ಬಿಡುಗಡೆ ಮಾಡಿಸುತ್ತೇನೆ.
*ರಾಘವೇಂದ್ರ, ಜೇಗರಕಲ್, ರಾಯಚೂರು ತಾಲ್ಲೂಕು: ನಮ್ಮೂರಲ್ಲಿ ಸಿಸಿ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದರೂ ಗ್ರಾಮ ಪಂಚಾಯಿತಿಯಿಂದ ಏನು ಕ್ರಮವಿಲ್ಲ. ಆಓ ಪ್ಲಾಂಟ್ ಹಾಳಾಗುತ್ತಿದೆ.
ಸಿಇಒ: ಬಚ್ಚಲು ನೀರು ರಸ್ತೆಗೆ ಬಿಡುವುದು ಸರ್ವೇಸಾಮಾನ್ಯವಾಗಿದೆ. ಇಂಗುಗುಂಡಿ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರದಿಂದ ಅನುದಾನ ಕೊಡುತ್ತಿದ್ದೇವೆ. ಅದನ್ನು ಜನರೇ ತಿಳಿದುಕೊಂಡು ಮಾಡಿಕೊಳ್ಳಬೇಕು. ಜೂನ್ ಒಳಗಾಗಿ ಆರ್ಓ ಪ್ಲಾಂಟ್ ದುರಸ್ತಿ ಮಾಡಲಾಗುತ್ತಿದೆ.
*ಸುರೇಶ ಕಟ್ಟಿಮನಿ, ಸಿಂಧನೂರು: ಬಿಸಿಎಂ ಬಾಲಕಿಯರ ಮೆಟ್ರಿಕ್ ವಸತಿ ನಿಲಯದಲ್ಲಿ ಮಾರ್ಚ್ 17 ರಂದು ವ್ಯಕ್ತಿಯೊಬ್ಬ ನುಗ್ಗಿದ ಘಟನೆ ನಡೆದಿತ್ತು. ಇವರೆಗೂ ಕ್ರಮವಾಗಿಲ್ಲ.
ಸಿಇಒ: ಈ ಬಗ್ಗೆ ಎಸ್ಪಿ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಳ್ಳಲಾಗುವುದು. ಅಗತ್ಯಬಿದ್ದರೆ ಕೇಸ್ ದಾಖಲಿಸಲಾಗುತ್ತದೆ.
*ಗಣ್ಯಾತಿ, ಮುರಾನಪುರ, ಮಾನ್ವಿ ತಾಲ್ಲೂಕು: ಕೆಕೆಆರ್ಡಿಬಿಯಿಂದ ಶಾಲಾ ಕೋಣೆಗಳನ್ನು ನಿರ್ಮಿಸಿದ್ದಾರೆ. ಶಾಲೆಗೆ ಆವರಣ ಗೋಡೆ ಇಲ್ಲದೆ ಜಮೀನುಗಳಿಂದ ನೀರು ನುಗ್ಗುತ್ತಿದೆ.
ಸಿಇಒ: ಶಾಲಾ ಆವರಣಗೋಡೆ ನಿರ್ಮಾಣ ಮಾಡುವ ಕಾರ್ಯ ಆರಂಭಿಸಲಾಗಿದೆ. ಡಿಸೆಂಬರ್ ಒಳಗಾಗಿ ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಿಗೂ ಆವರಣ ಗೋಡೆ ನಿರ್ಮಾಣವಾಗಲಿವೆ.
*ಖಾಸಿಂ, ನೀರಲಕೇರಿ: ಗ್ರಾಮ ಪಂಚಾಯಿತಿಯಿಂದ ಕೆರೆ ನಿರ್ಮಾಣ ಮಾಡಬೇಕು. ಉದ್ಯೋಗ ಖಾತರಿ ಕೆಲಸ ಸರಿಯಾಗಿ ಆಗುತ್ತಿಲ್ಲ
ಸಿಇಒ: ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಂದು ಎಕರೆ ವ್ಯಾಪ್ತಿಯ ಹೊಸ ಕೆರೆ ನಿರ್ಮಾಣ ಮಾಡಬೇಕು ಎಂದು ಈಗಾಗಲೇ ಯೋಜನೆ ಮಾಡಿರುವುದು ಅನುಮೋದನೆ ಆಗಿದೆ. ಉದ್ಯೋಗ ಖಾತರಿಯಲ್ಲಿ ಏನಾಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ
*ಲೋಕೇಶ, ನೆಲಹಾಳ, ರಾಯಚೂರು ತಾಲ್ಲೂಕು: ಕುಡಿಯುವ ನೀರಿನ ಕೆರೆಯಲ್ಲಿ ನೀರು ಸಂಪೂರ್ಣ ಹಾಳಾಗಿದೆ. ಮಕ್ಕಳು ವಾಂತಿ ಮಾಡುತ್ತಿವೆ
ಸಿಇಒ: ಕೆರೆಯಲ್ಲಿ ಕ್ಲೊರಿನೇಷನ್ ಮಾಡುವುದಕ್ಕೆ ಸೂಚಿಸುತ್ತೇನೆ. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದಷ್ಟೇ ಕೂಲಿ ಕೊಡಲಾಗುತ್ತಿದೆ.
*ಭೀಮಣ್ಣ, ವೈ.ಮಲ್ಲಾಪುರ, ರಾಯಚೂರು ತಾಲ್ಲೂಕು: ಬಹಳ ದೂರದಿಂದ ನೀರು ತರಬೇಕಾಗಿದೆ. ಓವರ್ಹೆಡ್ ಟ್ಯಾಂಕ್ನಿಂದ ನಲ್ಲಿಗಳಿಗೆ ನೀರು ಬಿಡುತ್ತಿಲ್ಲ.
ಸಿಇಒ: ಪಿಡಿಒ ಅವರಿಂದ ಪರಿಶೀಲನೆ ಮಾಡಿಸಿ, ನೀರು ಬಿಡುವ ವ್ಯವಸ್ಥೆ ಕಲ್ಪಿಸಲಾಗುವುದು
*ಸಿದ್ದಪ್ಪಗೌಡ, ದೇವಸುಗೂರು, ರಾಯಚೂರು: ಕಸ ವಿಲೇವಾರಿಗಾಗಿ ಜಾಗದ ಮಂಜೂರಿಯಾಗಿಲ್ಲ
ಸಿಇಒ: ಬಹುತೇಕ ಎಲ್ಲ ಪಂಚಾಯಿತಿಗಳಿಗೂ ಕಸ ವಿಲೇವಾರಿ ಯೋಜನೆ ಬರಲಿದೆ. ಸದ್ಯಕ್ಕೆ 100 ಗ್ರಾಮ ಪಂಚಾಯಿತಿ ಕ್ರಿಯಾಯೋಜನೆ ಅನುಮೋದನೆ ಆಗಿದೆ. ದೇವಸುಗೂರಿಗೆ ಅಗತ್ಯ ಇದೆ.
*ವಿಜಯಕುಮಾರ್, ಜಾಲಹಳ್ಳಿ, ದೇವದುರ್ಗ ತಾಲ್ಲೂಕು: ಚರಂಡಿಗಳೆಲ್ಲ ಭರ್ತಿಯಾಗಿ ಗಬ್ಬು ವಾಸನೆ ಹರಡಿಕೊಂಡಿದೆ. ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ
ಸಿಇಒ: ಲಾಕ್ಡೌನ್ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಶುಚಿತ್ವ ಮಾಡಿಸಲಾಗಿತ್ತು. ಮತ್ತೆ ಕಸ ಬಿದ್ದುಕೊಂಡಿದೆ. ಜನರಿಗೆ ಈ ಬಗ್ಗೆ ತಿಳಿವಳಿಕೆ ಬರಬೇಕಿದೆ. ಮತ್ತೊಮ್ಮೆ ಜಾಲಹಳ್ಳಿಯಲ್ಲಿ ಚರಂಡಿ ಸ್ವಚ್ಛತೆ ಮಾಡಿಸಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.