ಲಿಂಗಸುಗೂರು: ಇಲ್ಲಿನ ಬಸ್ ನಿಲ್ದಾಣ ಆವರಣದಲ್ಲಿನ ಕಾಂಕ್ರಿಟ್ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಗ್ರಹಪಡಿಸಿದರು.
ಮಂಗಳವಾರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಅಮರೇಶ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ ಅವರು, ₹ 90 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ₹ 6.25 ಲಕ್ಷದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸುವ ಕಾಮಗಾರಿಗಳಲ್ಲಿ ಕಬ್ಬಿಣದ ಸರಳು ಬಳಕೆ ಮಾಡಿಲ್ಲ. ನಿಗದಿತ ಸೈಜ್ ಕಂಕರ್, ಸಿಮೆಂಟ್ ಬಳಕೆ ಮಾಡಿಲ್ಲ ಎಂದು ದೂರಿದ್ದಾರೆ.
ಕಾಮಗಾರಿಗಳ ಅವಶ್ಯಕತೆ, ಗುಣಮಟ್ಟ ಕೇಳಿದರೆ ಎಇಇ ಹವಾಲ್ದಾರ್ ಸಂಘಟಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ಗುಣಮಟ್ಟ ಕೇಳುವ ಹಾಗಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಹೇಳಿದರು.
ಚುನಾಯಿತ ಪ್ರತಿನಿಧಿಗಳು ಕೂಡ ಬಸ್ ನಿಲ್ದಾಣ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ ಬಗ್ಗೆ ಆರೋಪ ಮಾಡಿದರೂ ಕೂಡ ಸಾರಿಗೆ ಸಂಸ್ಥೆಯ ಯಾವೊಬ್ಬ ಅಧಿಕಾರಿಗಳು ತನಿಖೆ ನಡೆಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಕಾಮಗಾರಿ ಪರಿಶೀಲನೆಗಾಗಿ ರಾತ್ರಿ 10ಗಂಟೆಗೆ ಭೇಟಿ ನೀಡಿದ್ದ ಸಾರಿಗೆ ಸಂಸ್ಥೆ ಅಧಿಕಾರಿಗಳು ಕಾಟಾಚಾರದ ತನಿಖೆ ನಡೆಸಿ ಅವ್ಯವಹಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು.
ಗುತ್ತಿಗೆದಾರ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಕಾನೂನು ಕ್ರಮಕ ಕೈಗೊಳ್ಳದೆ ಹೋದಲ್ಲಿ ಜಿಲ್ಲಾ ವ್ಯಾಪ್ತಿ ಹೋರಾಟ ಚುರುಕುಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಉಮೇಶ ಹುನಕುಂಟಿ, ತಾಲ್ಲೂಕು ಅಧ್ಯಕ್ಷ ಶಶಿಧರ ಹೊಸಮನಿ, ಶಿವರೆಡ್ಡಿ ಲಿಂಗಸುಗೂರು, ರವಿಪಾಟೀಲ್ ಐದನಾಳ, ಶಹನವಾಜ, ಶೇಖಫಾರೂಕ್, ರಾಮಣ್ಣ ಹಟ್ಟಿ, ವಿನೋದಕುಮಾರ, ಹುಲಗಪ್ಪ ಆನೆಹೊಸೂರು, ಬಾಳಪ್ಪ ಆನೆಹೊಸೂರು, ಶಿವಪುತ್ರ ಮಾಚನೂರು ಇದ್ದರು.