ರಾಯಚೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಕಚೇರಿಯಲ್ಲಿ ಅತಿಥಿ ಸಿಇಒ ಸ್ಥಾನವನ್ನು ನಗರದ ಸ್ಟೇಷನ್ ಬಜಾರ್ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನ್ನಪೂರ್ಣಾ ಅವರು ವಹಿಸಿಕೊಂಡು ಗಮನ ಸೆಳೆದರು!
ಹೌದು, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ವಿದ್ಯಾರ್ಥಿನಿಗೆ ಅರ್ಧಗಂಟೆಯ ಮಟ್ಟಿಗೆ ಸಿಇಒ ಆಗುವ ಅವಕಾಶವನ್ನುಶುಕ್ರವಾರ ಒದಗಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ‘ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿಯೂ ತನ್ನ ಛಾಪು ಮೂಡಿಸುತ್ತಿದ್ದಾರೆ, ಸಮಾಜದಲ್ಲಿ ಅವರಿಗೆ ಪುರುಷರಿಗೆ ಸಮಾನ ಅವಕಾಶಗಳು ದೊರೆಯುತ್ತಿವೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಹೆಣ್ಣಿನ ಪಾತ್ರ ಅತ್ಯಂತ ಪ್ರಮುಖವಾಗಿದೆ, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಅಧ್ಯಯನ ಮಾಡಿ, ಉತ್ತಮ ಫಲಿತಾಂಶ ಪಡೆದು, ಜೀವನದಲ್ಲಿ ನಿಗದಿತ ಗುರಿ ತಲುಪಲು ಶ್ರಮಿಸಬೇಕು’ ಎಂದರು.
ಸಿಇಓ ಸ್ಥಾನ ಅಲಂಕರಿಸಿದ್ದ ಅನ್ನಪೂರ್ಣಾ ಮಾತನಾಡಿ, ‘ಈ ಸ್ಥಾನದಲ್ಲಿ ಕುಳಿತಿದ್ದು ತುಂಬಾ ಸಂತೋಷ ತಂದಿದೆ. ಮುಖ್ಯವಾಗಿ ಐಎಎಸ್ ಮಾಡುವ ಗುರಿಯನ್ನು ತಲುಪುವುದಕ್ಕೆ ಇದು ಪ್ರೇರಣೆ ನೀಡಿದೆ, ಐಎಎಸ್ ಅಧಿಕಾರಿಯಾಗುವ ಆಸೆಯನ್ನು ಬಡಿದೆಬ್ಬಿಸಿದೆ, ಮುಂದೆ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡುವೆ’ ಎಂದು ತಿಳಿಸಿದಳು.
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ನಾಜಿಯಾ ಸುಲ್ತಾನ ಮಾತನಾಡಿ, ‘ಛಲದಿಂದ ವಿದ್ಯಾಭ್ಯಾಸ ಮಾಡಿ ನಾನಿಂದು ಕೆ.ಎ.ಎಸ್. ಧಿಕಾರಿಯಾಗಿದ್ದೆನೆ, ಯಾವುದೇ ಹೆಣ್ಣು ಮಕ್ಕಳು ಹಿಂಜರಿಕೆಯಿಲ್ಲದೇ ಗುರಿಯಿಟ್ಟುಕೊಂಡು ಶ್ರಮವಹಿಸಿ ಪ್ರಯತ್ನಿಸಿದಾಗ ಯಶಸ್ಸು ದೊರೆಯುತ್ತದೆ’ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಹ್ಮದ್ ಇಸ್ಮಾಯಿಲ್ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎಚ್.ಗೋನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ ಇದ್ದರು.
ಶಾಲೆಯಿಂದ ವಿದ್ಯಾರ್ಥಿಗಳಿಗೆಲ್ಲ ಜಿಲ್ಲಾ ಪಂಚಾಯಿತಿ ಹಾಗೂ ನ್ಯಾಯಾಲಯದ ವಿವಿಧ ಶಾಖೆಗಳನ್ನು ಪರಿಚಯ ಮಾಡಿಕೊಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.