ರಾಯಚೂರು: ಸಂವಿಧಾನದ ಜಾತ್ಯತೀತ ಆಶಯಗಳನ್ನು ಬುಡಮೇಲು ಮಾಡುವ ಹುನ್ನಾರ ವಿರೋಧಿಸಿ ಸಂವಿಧಾನ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾ ಘಟಕದ ಸದಸ್ಯರು ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಧರಣಿ ನಡೆಸಿದರು.
ಬಾಬರಿ ಮಸೀದಿ ಧ್ವಂಸ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವಾಗಲೇ ಬಿಜೆಪಿ ಸರ್ಕಾರ ಕಾನೂನು ಕೈಗೆ ತೆಗೆದುಕೊಂಡು ಕಾನೂನಿನ ವಿರುದ್ಧವಾಗಿ ನಡವಳಿಕೆ ಅನುಸರಿಸುತ್ತಿದೆ. ಕೇಂದ್ರದ ಎನ್ಡಿಎ ಸರ್ಕಾರದ ನೀತಿಗಳಿಂದ ಬೆಲೆ ಏರಿಕೆ ಹಾಗೂ ಜನವಿರೋಧಿ ಕ್ರಮಗಳಿಂದ ಜನತೆ ಬೇಸತ್ತಿರುವ ಅವರ ಗಮನ ಬೇರೆಡೆ ಸೆಳೆಯಲು ಆರ್ಎಸ್ಎಸ್ ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳು ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಗೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನ ಬದಲಾವಣೆಗೆ ಅಧಿಕಾರಕ್ಕೆ ಬಂದಿರುವುದಾಗಿ ಕೇಂದ್ರ ಸಚಿವರು ಹೇಳುವುದು, ಸಾಹಿತಿಗಳ, ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿರುವುದು, ಶಬರಿಮಲೆಯ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡಲು ಕೋಮು ಸೌಹಾರ್ದತೆ ಹದಗೆಡಿಸಲಾಗಿದೆ ಎಂದು ಆರೋಪಿಸಿದರು.
ಸಂವಿಧಾನದ ವಿರುದ್ಧವಾಗಿ ನಡೆಯುತ್ತಿರುವ ಹುನ್ನಾರಗಳನ್ನು ಹಿಮ್ಮೆಟ್ಟಿಸಬೇಕಿದ್ದು, ರಾಷ್ಟ್ರದ ಐಕ್ಯತೆ ಕಾಪಾಡಲು ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸಲಿವೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಶರಣಬಸವ, ಎಚ್.ಪದ್ಮಾ, ವರಲಕ್ಷ್ಮೀ, ರಂಗಪ್ಪ, ಮಹಾದೇವ, ಸುಲೋಚನ, ಯಂಕಪ್ಪ ಇದ್ದರು.