ಆಯೋಗಕ್ಕೆ ಬಂಗಿ ಜನರನ್ನು ನೇಮಿಸಲು ಒತ್ತಾಯ

ರಾಯಚೂರು: ಮಲಹೊರುವ ಪದ್ಧತಿ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರವು ಸ್ಥಾಪಿಸಿದ ಸಫಾಯಿ ಕರ್ಮಚಾರಿ ಆಯೋಗ ಹಾಗೂ ರಾಜ್ಯದಲ್ಲಿರುವ ಆಯೋಗಕ್ಕೆ ಬಂಗಿ ಸಮುದಾಯದವರನ್ನೇ ಅಧ್ಯಕ್ಷ ಅಥವಾ ಆಡಳಿತ ಮಂಡಳಿ ಸ್ಥಾನದಲ್ಲಿ ನೇಮಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ್ಬಾಬು ಒತ್ತಾಯಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ಬದಲಾಗುತ್ತಿವೆ ಆದರೆ ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ ಬದಲಾಗುತ್ತಿಲ್ಲ. ಬೇರೆ ಸಮುದಾಯದ ನಾಯಕರಿಗೆ ಬಂಗಿ ಜನರ ಸಮಸ್ಯೆ ಅರ್ಥವಾಗುವುದಿಲ್ಲ. ಯೋಜನೆ ಅನುಷ್ಠಾನದಲ್ಲಿ ಅನ್ಯಾಯ ಆಗುತ್ತಿರುವುದರಿಂದ ಇಂದಿಗೂ ಬಂಗಿ ಜನರು ಮಲಮೂತ್ರಗಳಲ್ಲಿ ಈಜಾಡಿ ಸಾಯುವಂತಹ ಸ್ಥಿತಿ ಇದೆ ಎಂದರು.
ಸಮುದಾಯದ ಜನರ ಸಮೀಕ್ಷೆ ನಡೆಸಿದ್ದರೂ ಅನೇಕರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಬಂಗಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ವಸತಿ ನಿರ್ಮಾಣಕ್ಕೆ ಯೋಜನೆಗಳಿದ್ದರೂ ಮನೆ ನಿರ್ಮಿಸುತ್ತಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಿತಿ ಸಭೆಯ ಚರ್ಚಿಸುವ ಸಂಗತಿಗಳು ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೇಮರಾಜ ಅಸ್ಕಿಹಾಳ, ಶಾಂತಕುಮಾರ್, ಪ್ರೇಮಸಿಂಗ್, ರವೀಂದ್ರ ಬೋಸ, ವಿರೇಶ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.