ರಾಯಚೂರು: ನಗರದಲ್ಲಿರುವ ಗುಲಬರ್ಗಾ ಬಿಲ್ಡರ್ಸ್ ಪ್ರದೇಶ,ಅನುಷಾ ನಗರ ಮತ್ತು ಭಾರತ ನಗರಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಅನುಷಾ ನಗರ ‘ಗುಲ್ಬರ್ಗಾ ಬ್ಯುಲ್ಡರ್ಸ್ ಭಾರತ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ದ ಪದಾಧಿಕಾರಿಗಳು ಮತ್ತು ನಿವಾಸಿಗಳು ನಗರಸಭೆ ಹಾಗೂ ಜಿಲ್ಲಾಡಳಿತ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಮೂರು ಬಡಾವಣೆಗಳಿಗೆ ಒಳಚರಂಡಿ, ಶುದ್ದ ಕುಡಿಯುವ ನೀರು, ಬೀದಿ ದೀಪಗಳು, ರಸ್ತೆಯನ್ನು ನಿರ್ಮಾಣ ಮಾಡಬೇಕು. ಒಳಚರಂಡಿ ಕಾಮಗಾರಿ ಪ್ರಾರಂಭವಾಗಿ ಅರ್ಧಕ್ಕೆ ನಿಂತಿದೆ. ಇದರಿಂದ ಶೌಚಾಲಯದ ನೀರು ಒಳಚರಂಡಿಯ ತಗ್ಗು ಪ್ರದೇಶದಲ್ಲಿ ನಿಂತಿದ್ದರಿಂದ ದುರ್ವಾಸನೆ ಹಬ್ಬಿದೆ. ಸುತ್ತಮುತ್ತಲಿನ ನಿವಾಸಿಗಳು ರೋಗ ರುಜಿನಕ್ಕೆ ತುತ್ತಾಗುವ ಸಾಧ್ಯತೆ ಇದೆ. ಕೂಡಲೇ ನಗರಸಭೆ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಬೀದಿದೀಪ, ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣ ಮಾಡಿ ಇತರೆ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಪದಾಧಿಕಾರಿ ಡಾ.ನರಸಿಂಹಲು, ಈರಣ್ಣ ಮಾಲಿ ಪಾಟೀಲ, ರವಿಂದ್ರ ಜಲ್ದಾರ್, ರಾಜುಗೌಡ ಪಾಟೀಲ, ಶರಣಗೌಡ, ವೆಂಕಟೇಶ, ಗೋಪಾಲ, ಹನುಮಂತ, ಕರಿಯಪ್ಪ, ಗುರುರಾಜ, ರಾಜೇಶ, ಕರೆಪ್ಪ ಇದ್ದರು.